ಬ್ರಾಹ್ಮಣರ ಮನೆಯಲ್ಲಿ ದಲಿತರ ಮದುವೆ (ಪ್ರ.ವಾ., ಮೇ 26) ವರದಿ ಓದಿ ತುಂಬಾ ಖುಷಿಯಾಯಿತು. ಜಾತಿ, ಜನಾಂಗ, ಪಂಥಗಳನ್ನು ಮೀರಿ ವಿವಿಧ ಹಿನ್ನೆಲೆಯ ಎಲ್ಲ ಸಮುದಾಯಗಳೂ ಒಂದಾಗಬೇಕು. ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ಸಾಮುದಾಯಿಕ ಭಾವನೆಯೊಂದಿಗೆ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು.
ಇದರಿಂದ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಬಡವ-ಶ್ರೀಮಂತ ಎಂಬ ಭೇದಭಾವ ಕಡಿಮೆಯಾಗುತ್ತದೆ. ಅಲ್ಲದೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಆಶಯಗಳಿಗೆ, ವಿಚಾರಗಳಿಗೆ ಗೌರವ ಕೊಟ್ಟಂತೆ ಆಗುತ್ತದೆ.
ದಲಿತ ಕುಟುಂಬದ ಮದುವೆ ಕಾರ್ಯವನ್ನು ಬ್ರಾಹ್ಮಣರು ತಮ್ಮ ಮನೆಯಲ್ಲಿ ನೆರವೇರಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ರಚನಾತ್ಮಕ ಕಾರ್ಯಗಳು ಹೆಚ್ಚಾಗಲಿ. ಜಾತಿ ಪ್ರಜ್ಞೆ ಕಡಿಮೆ ಮಾಡಲು ಇಂತಹ ಕೆಲಸಗಳು ಪೂರಕ.