‘ಜೀ’ ವಾಹಿನಿಯಲ್ಲಿ ಪ್ರತಿ ದಿನ ಪ್ರಸಾರವಾಗುವ ‘ಒಗ್ಗರಣೆ ಡಬ್ಬಿ’ ರಿಯಾಲಿಟಿ ಷೋ ಐನೂರು ಕಂತುಗಳನ್ನು ಪೂರೈಸಿದ ಸಂಭ್ರಮಕ್ಕೆ ರವಿಚಂದ್ರನ್ ಸಾಕ್ಷಿಯಾಗಿದ್ದರು. ಆರೋಗ್ಯಕ್ಕೆ ಪೂರಕವಾದ ವಿವಿಧ ಬಗೆಯ ಅಡುಗೆಗಳನ್ನು ಹೇಗೆ ಮಾಡಬಹುದು ಎಂಬುದನ್ನು ಸಸ್ಯಾಹಾರಿ ಹಾಗೂ ಮಾಂಸಾಹಾರಿ ಬಾಣಸಿಗರು ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಜತೆಗೆ ಬೇರೆ ಬೇರೆ ಭಾಗಗಳಿಂದಲೂ ಮಹಿಳೆಯರು ಅಡುಗೆ ಮಾಡಿ ತೋರಿಸುವ ಜನಪ್ರಿಯ ಕಾರ್ಯಕ್ರಮ ಇದು. ಸಸ್ಯಾಹಾರದ ಸುಮಾರು 2,000 ತಿಂಡಿಗಳ ಪೈಕಿ ನೂರು ತಿನಿಸುಗಳನ್ನು ಆಯ್ಕೆ ಮಾಡಿ, ಪುಸ್ತಕವನ್ನೂ ಪ್ರಕಟಿಸಲಾಗಿದೆ. ಇದೇ ರೀತಿ ಮಾಂಸಾಹಾರಿ ತಿನಿಸುಗಳ ಪುಸ್ತಕ ಕೂಡ ಪ್ರಕಟಿಸುವ ಯೋಚನೆ ತಂಡದ್ದು.
500ನೇ ಕಂತಿನ ವಿಶೇಷ ಕಾರ್ಯಕ್ರಮಕ್ಕೆ ಬಂದಿದ್ದ ರವಿಚಂದ್ರನ್, ‘ಕಲ್ಮಿಕಬಾಬ್’ ಸವಿದರು. ‘ನನಗೆ ಅಡುಗೆ ಮಾಡುವುದು ಗೊತ್ತಿಲ್ಲ. ಆದರೆ ಬಿಸಿಬಿಸಿ ಆಹಾರ ತಿನ್ನುವ ಅಭ್ಯಾಸ ಮಾತ್ರ ಮೊದಲಿನಿಂದಲೂ ಇದೆ. ಸಿನಿಮಾ ಡಬ್ಬಿ ನೋಡಿದ್ದೇನೆ. ಈಗ ಒಗ್ಗರಣೆ ಡಬ್ಬಿ ನೋಡುತ್ತಿದ್ದೇನೆ’ ಎಂದು ಕ್ರೇಜಿಸ್ಟಾರ್ ಹೇಳಿದರು. ಬಳಿಕ ಕೇಕ್ ಕತ್ತರಿಸಿ, ಪುಸ್ತಕ ಬಿಡುಗಡೆ ಮಾಡಿ, ತಂಡದ ಸದಸ್ಯರಿಗೆ ಶುಭ ಕೋರಿದರು.
ನಾಗಭೂಷಣ್ ಅವರ ನಿರ್ದೇಶನದಲ್ಲಿ ಈ ಕಾರ್ಯಕ್ರಮವನ್ನು ಮುರಳಿ ನಿರ್ವಹಿಸುತ್ತಿದ್ದಾರೆ. ಜೀ ಚಾನೆಲ್ನಲ್ಲಿ ಇದು ಪ್ರತಿದಿನ ಬೆಳಿಗ್ಗೆ 9.30ರಿಂದ 10ರವರೆಗೆ ಪ್ರಸಾರವಾಗುತ್ತಿದೆ.