ಮಂಗಳೂರು: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅಗತ್ಯ ಇರುವ 31 ಕಡೆ ರಸ್ತೆ ಉಬ್ಬುಗಳನ್ನು ಜನವರಿ 15ಕ್ಕೆ ಮುನ್ನ ಅಳವಡಿಸಬೇಕು. ಅವುಗಳಿಗೆ ಸೂಕ್ತ ಬಣ್ಣ ಬಳಿದು, ಸೂಚನಾ ಫಲಕಗಳನ್ನೂ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಪಾಲಿಕೆ ಪ್ರಭಾರ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ರಸ್ತೆ ಉಬ್ಬುಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್, ನಗರದ ರಸ್ತೆ ಉಬ್ಬುಗಳು ಅಸಮರ್ಪಕವಾಗಿದ್ದು, ಪಾದಚಾರಿ ಮಾರ್ಗಗಳೂ ಇಲ್ಲ. ಇದರಿಂದ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಭೆಯ ಗಮನ ಸೆಳೆದರು.
ಭಾರತೀಯ ರಸ್ತೆ ಕಾಂಗ್ರೆಸ್ನ ನಿಯಮದಂತೆಯೇ ರಸ್ತೆ ಉಬ್ಬುಗಳನ್ನು ಮಾಡಬೇಕು. ಕಾಂಕ್ರಿಟೀಕರಣಕ್ಕೆ ನೀಡುವಷ್ಟು ಆಸಕ್ತಿಯನ್ನು ರಸ್ತೆ ಉಬ್ಬು, ಪಾದಚಾರಿ ಮಾರ್ಗಗಳಿಗೆ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು. ಈ ವಿಷಯ ದಲ್ಲಿ ಪಾಲಿಕೆ ಪ್ರಭಾರ ಆಯುಕ್ತ ಗೋಕುಲ್ದಾಸ್ ನಾಯಕ್ ಮತ್ತು ಹನುಮಂತ ಕಾಮತ್ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಅವರು ಸಾರ್ವಜನಿಕರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಗುಣಮಟ್ಟದ ಹಂಪ್ಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು. ನಗರದ ವಿವಿಧ ಕಡೆಗಳಲ್ಲಿ ರಸ್ತೆ ಕಾಂಕ್ರಿಟೀಕರಣ ಆಗಿ ಹಲ ವಾರು ವರ್ಷಗಳಾದರೂ ಇದುವರೆಗೂ ಪಾದಚಾರಿ ಮಾರ್ಗ ನಿರ್ಮಾಣ ಆಗದೆ ಇರುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.
ಆಟೊ ಪಾರ್ಕ್: ನಗರದಲ್ಲಿ ಆಟೊ ಪಾರ್ಕ್ಗಳನ್ನು ನಿರ್ಮಾಣ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ ಆಟೊ ಚಾಲಕರ–ಮಾಲೀಕರ ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜನವರಿ ತಿಂಗಳೊಳಗೆ ವಾರ್ಡ್ಗೆ ಒಂದರಂತೆ ಕನಿಷ್ಠ 60 ಆಟೊ ಪಾರ್ಕ್ಗಳನ್ನು ಪೂರ್ಣಗೊಳಿಸಬೇಕು. ಜತೆಗೆ ಬಸ್ ಬೇಗಳನ್ನೂ ಶೀಘ್ರವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ರಸ್ತೆ ದುರಸ್ತಿ ಮಾಡಿ: ಕೂಳೂರಿನಿಂದ ಪಣಂಬೂರು ವರೆಗೆ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ರಸ್ತೆ ಹೊಂಡ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಆದ್ಯತೆ ನೆಲೆಯಲ್ಲಿ ದುರಸ್ತಿ ಮಾಡಬೇಕು ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಒತ್ತಾಯಿಸಿದರು.
ರಸ್ತೆ ದುರಸ್ತಿಗೆ ಸರ್ಕಾರ ಈಗಾಗಲೇ ಅನುದಾನ ಮಂಜೂರು ಮಾಡಿದ್ದು, ಸದ್ಯದಲ್ಲೇ ತೇಪೆ ಕಾಮಗಾರಿ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
ರಸ್ತೆ ಸುರಕ್ಷತೆಗೆ ಕ್ರಮ–ಎಸ್ಪಿ: ಉಜಿರೆ, ಬೆಳ್ತಂಗಡಿ, ಪುತ್ತೂರು ಹಾಗೂ ಬಂಟ್ವಾಳಗಳಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳು ಆದೇಶ ಹೊರಡಿಸಿದರೆ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್.ಪಿ. ಡಾ. ಎಸ್ಡಿ.ಶರಣಪ್ಪ ತಿಳಿಸಿದರು.
ಸುರಕ್ಷತೆಗಾಗಿ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ನಾಯ್ಕ್, ವಿಷ್ಣುಮೂರ್ತಿ, ಇಸ್ಮಾಯಿಲ್, ಬಿ.ಎಸ್. ಹಸನಬ್ಬ ಅಮ್ಮೆಂಬಳ ಮತ್ತಿತರರು ಇದ್ದರು.
ಶಿರಾಡಿ ಹೆದ್ದಾರಿ ಬಂದ್– ದಿನ ನಿಗದಿ ಇಲ್ಲ
ಶಿರಾಡಿ ಘಾಟಿ ದುರಸ್ತಿಗಾಗಿ ರಸ್ತೆಯಲ್ಲಿ ಸಂಚಾರ ನಿಷೇಧಿಸುವ ದಿನದ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ. ಆಗುಂಬೆ ಮತ್ತು ಮಾಣಿ–ಮೈಸೂರು ಹೆದ್ದಾರಿಯಲ್ಲೂ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಇದೇ 25ಕ್ಕೆ ಮುನ್ನ ಪೂರ್ಣಗೊಳಿಸಬೇಕಿದೆ. ಇದಕ್ಕೂ ಮುನ್ನ ಶಿರಾಡಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದರೆ ಈ ರಸ್ತೆಗಳಲ್ಲಿ ಕಾಮಗಾರಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಇದೇ 25ಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದು, ಆ ಬಳಿಕವೇ ಶಿರಾಡಿ ಘಾಟ್ನಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.