ತೋವಿನಕೆರೆ: ತುಮಕೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ರಸ್ತೆ ಸುಧಾರಣೆ ಬಗ್ಗೆ ಲೋಕೋಪಯೋಗಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಇಲಾಖೆಯ ಅಣಕು ಪುಣ್ಯತಿಥಿ ನಡೆಸಿ, ಪ್ರತಿಭಟನೆ ನಡೆಸಿದರು.
ಕಳೆದ 25 ವರ್ಷಗಳಿಂದ ದುರಸ್ತಿ ಕಾಣದೇ ಹಲ ಅಪಘಾತಗಳು ಸಂಭವಿಸಿವೆ. ಆದರೂ ಇಲಾಖೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಈ ಹಿಂದೆ ಇಲಾಖೆಯ ತಿಥಿ ಮಾಡಿದರೂ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.
ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮನೆಗೆ ಬಂದಿದ್ದ ಜನಪ್ರತಿನಿಧಿಗಳು ರಸ್ತೆ ಸುಧಾರಣೆಗೆ ಮುಂದಾಗುವುದಾಗಿ ಭರವಸೆ ನೀಡಿದ್ದರೂ ಆದರೂ ಯಾವುದೇ ಕೆಲಸಗಳು ಇಂದಿಗೂ ಆರಂಭವಾಗಿಲ್ಲ ಎಂದು ದೂರಿದರು.
ಕೂಡಲೇ ಇಲಾಖೆ ತುಮಕೂರು–ತೋವಿನಕೆರೆ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿ ಭಾನುವಾರ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುತ್ತದೆ. ನಮ್ಮ ಸಿಟ್ಟು ಇಲಾಖೆ ಮೇಲೆ ಮಾತ್ರ. ಯಾವ ಜನಪ್ರತಿನಿಧಿಯನ್ನು ವೈಯಕ್ತಿವಾಗಿ ದೂರುವುದಿಲ್ಲ. ಮುಂದಿನ ದಿನಗಳಲ್ಲಿ ಮೂಲಸೌಕರ್ಯಕ್ಕಾಗಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದು ಮೇಳೆಹಳ್ಳಿ ಡಮರುಗ ಉಮೇಶ ಹೇಳಿದರು.
ಹತ್ತು ವರ್ಷಗಳಿಂದ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ರಸ್ತೆ ದುರಸ್ತಿಗೂ ಕೋರಲಾಗಿದೆ. ಪ್ರತಿದಿನ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇದರ ಬಗ್ಗೆ ಇಲಾಖೆ ಗಮನಿಸಬೇಕು ಎಂದರು.
ಕೊನೆಯಲ್ಲಿ ಲೋಕೋಪಯೋಗಿ ಇಲಾಖೆ ಅಣಕು ಪುಣ್ಯತಿಥಿಕಾರ್ಯವು ಶಾಸ್ತ್ರ ಬದ್ಧವಾಗಿ ನಡೆಯಿತು. ಇದೇ ವೇಳೆ ೧೫ಕ್ಕೂ ಹೆಚ್ಚು ಟ್ರ್ಯಾಕ್ಟ್ರ, ಎರಡು ಜೆಸಿಬಿ ಯಂತ್ರ ಹಾಗೂ ನೂರಾರು ಜನರು, ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಐದು ಕಿ.ಮೀ ಉದ್ದದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದರು.