ಕಠ್ಮಂಡು (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು 18ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನ.25 ರಂದು ಇಲ್ಲಿಗೆ ರಸ್ತೆ ಮಾರ್ಗದ ಮೂಲಕ ಭೇಟಿ ನೀಡುವ ಸಂಭವ ಇದೆ.
ಈ ಕಾರಣ ಪೂರ್ವ- ಪಶ್ಚಿಮ ಹೆದ್ದಾರಿಯ ಭಿಟ್ಟಮೊದ್- ಜನಕ್ಪುರ ವಿಭಾಗದಲ್ಲಿ ತಕ್ಷಣ ನವೀಕರಣ ಕಾಮಗಾರಿ ಕೈಗೊಳ್ಳಬೇಕು ಎಂದು ನೇಪಾಳದ ಸಂಸದೀಯ ಅಭಿವೃದ್ಧಿ ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ.
ನಾಲ್ಕು ದಿನಗಳ ಭೇಟಿ ಅವಧಿಯಲ್ಲಿ ಮೋದಿ ಅವರು ಮೂರು ಧಾರ್ಮಿಕ ಸ್ಥಳಗಳಿಗೂ (ಜನಕ್ಪುರ, ಲುಂಬಿನಿ ಮತ್ತು ಮುಕ್ತಿನಾಥ) ಭೇಟಿ ನೀಡಲಿದ್ದಾರೆ. ನವೆಂಬರ್ 26 ಮತ್ತು -27ರಂದು ಸಾರ್ಕ್ ಶೃಂಗಸಭೆ ನಡೆಯಲಿದೆ. ಮೋದಿ ಅವರು ಆಗಸ್್ಟನಲ್ಲಿ ಮೊದಲ ಬಾರಿ ನೇಪಾಳಕ್ಕೆ ತೆರಳಿದ್ದ ಸಂದರ್ಭದಲ್ಲೇ ಜನಕ್ಪುರಕ್ಕೆ ಭೇಟಿ ನೀಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.
ಜನಕ್ಪುರದಲ್ಲಿ ರಾಮ್- ಜಾನಕಿ ಮಂದಿರಕ್ಕೆ ಭೇಟಿ ನೀಡುವ ಮೋದಿ ಅವರು ನಂತರದಲ್ಲಿ ಜನಕ್ಪುರ ಗಡಿ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಅವರು ಭಾರತದಿಂದ ಜನಕ್ಪುರಕ್ಕೆ ನೇರವಾಗಿ ರಸ್ತೆ ಮಾರ್ಗದ ಮೂಲಕ ಬರುವ ಸಂಭವ ಇದೆ. ಅಥವಾ ಕಠ್ಮಂಡುವಿಗೆ ವಿಮಾನದಲ್ಲಿ ಬಂದು ನಂತರ ರಸ್ತೆ ಮೂಲಕ ಅಲ್ಲಿಗೆ ತೆರಳುವ ಸಾಧ್ಯತೆ ಇದೆ. ಅವರ ಪ್ರವಾಸದ ವಿವರಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ ಎಂದು ಸಾರಿಗೆ ಸಚಿವಾಲಯದ ಕಾರ್ಯದರ್ಶಿ ತುಳಸಿ ಪ್ರಸಾದ್ ಹೇಳಿದ್ದಾರೆ.
ನವೆಂಬರ್ 25ರಂದು ಮೋದಿ ಅವರು ನೇಪಾಳ ಮತ್ತು ಸಾರ್ಕ್ನ ಇತರ ಸದಸ್ಯ ರಾಷ್ಟ್ರಗಳ ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಪಶುಪತಿನಾಥ ದೇವಾಲಯಕ್ಕೂ ಭೇಟಿ ನೀಡುವರು ಎನ್ನಲಾಗಿದೆ. ನವೆಂಬರ್ 26 ಮತ್ತು 27ರಂದು ಶೃಂಗಸಭೆಯಲ್ಲಿ ಪಾಲ್ಗೊಂಡು 28ರಂದು ಭಾರತಕ್ಕೆ ಮರಳುವ ಮೊದಲು ಮುಕ್ತಿನಾಥ ದೇವಾಲಯಕ್ಕೆ ತೆರಳುವರು. ಬುದ್ಧನ ಜನ್ಮ ಸ್ಥಳ ಲುಂಬಿನಿಗೆ ಭೇಟಿ ನೀಡುವ ಬಗ್ಗೆ ಭಾರತದ ಅಧಿಕಾರಿಗಳ ಜತೆ ಇನ್ನೂ ವಿವರಗಳನ್ನು ಚರ್ಚಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.