ಹರಿಹರದಿಂದ ಹುಬ್ಬಳ್ಳಿವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 4, ಚತುಷ್ಪಥ ಮಾರ್ಗವಾಗಿದ್ದು ಇಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೂ ಭಾರಿ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಶುಲ್ಕವೇಕೆಂಬ ಪ್ರಶ್ನೆಗೆ ನಿರ್ಮಾಣ, ನಿರ್ವಹಣೆಯ ವೆಚ್ಚವೆಂಬ ಉತ್ತರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೊರೆಯುತ್ತದೆ. ಆದರೆ ಉಲ್ಲೇಖಿತ ಮಾರ್ಗದಲ್ಲಿ ಸಿಗುವ ಯಾವುದೇ ಹಳ್ಳಿ, ಪಟ್ಟಣಗಳಿಗೂ ಉತ್ತಮ ಸೇವಾ ರಸ್ತೆಯೇ ಇಲ್ಲ. ಈ ರಸ್ತೆಗಳನ್ನು ಬಳಸುವಾಗ ಚಾಲಕರು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಿದರೂ ವಾಹನಗಳು ಗುಂಡಿಗೆ ಬೀಳುವ, ಅಡಿಗಟ್ಟಿಗೆ ತಾಗುವ ಅಪಾಯವಿದೆ.
ಇನ್ನು ಬಹುತೇಕ ಸೇತುವೆಗಳ ರಸ್ತೆಯನ್ನು ಸಂಧಿಸುವ ಜಾಗಗಳು ಸಮತಟ್ಟಾಗಿಲ್ಲದೆ ಇರುವುದರಿಂದ ವೇಗವಾಗಿ ಸಾಗುವ ವಾಹನಗಳು ವಿಮಾನದಂತೆ ಅರೆಕ್ಷಣ ತೇಲಿ, ನಿಯಂತ್ರಣ ತಪ್ಪುತ್ತಿವೆ. ಬಹಳಷ್ಟು ಕಡೆ ಭಾರದ ವಾಹನಗಳಿಂದಾಗಿ ರಸ್ತೆಯು ಉಬ್ಬುತಗ್ಗುಗಳಿಂದ ಕೂಡಿದ್ದರೂ ಅವುಗಳನ್ನು ದುರಸ್ತಿ ಮಾಡಿಲ್ಲ.
ಮಂತ್ರಿಮಹೋದಯರಿಗೆ ಶುಲ್ಕದಲ್ಲಿ ವಿನಾಯಿತಿ ಇದೆ, ಬೆಂಗಾವಲು ಪಡೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ 30– 40 ಲಕ್ಷ ರೂಪಾಯಿ ಬೆಲೆ ಬಾಳುವ ವಾಹನಗಳು ಅವರ ಬಳಿ ಇರುತ್ತವೆ. ಹೀಗಾಗಿ ಕಡಿಮೆ ಕಿಮ್ಮತ್ತಿನ ವಾಹನಗಳನ್ನು ಹೊಂದಿರುವ ಜನಸಾಮಾನ್ಯರ ಬವಣೆ ಅವರಿಗೆ ಅರ್ಥವಾಗುವುದಿಲ್ಲ. ಹೆದ್ದಾರಿ ಪ್ರಾಧಿಕಾರಕ್ಕೆ ದೂರಿದರೆ ಕಳೆದ ಮೂರು ವರ್ಷಗಳಿಂದಲೂ ‘ದುರಸ್ತಿ ಮಾಡಲಾಗುವುದು’ ಎಂಬ ಉತ್ತರ ಬರುತ್ತಿದೆ. ಸಂಗ್ರಹಿಸುವ ಶುಲ್ಕವನ್ನು ರಸ್ತೆ ನಿರ್ವಹಣೆಗೆ ಪ್ರಾಮಾಣಿಕವಾಗಿ ಖರ್ಚು ಮಾಡಿ ಪ್ರಯಾಣಿಕರಿಗೆ ಉಪಕರಿಸಲಿ.
- ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು