ನವದೆಹಲಿ (ಪಿಟಿಐ): ಭಾರತದಲ್ಲಿ ರಾಜಕೀಯ ಮುಖಂಡರು ಹಾಗೂ ಇತರರ ಮೇಲೆ ಅಮೆರಿಕದ ಗುಪ್ತಚರ ಸಂಸ್ಥೆ ನಿಗಾ ಇಟ್ಟಿದ್ದು ಸರಿಯಲ್ಲ ಎಂದು ಭಾರತವು ಅಮೆರಿಕಕ್ಕೆ ಖಡಾಖಂಡಿತವಾಗಿ ಹೇಳಿದೆ.
ಆದರೆ, ತನ್ನ ದೇಶದ ಕಣ್ಗಾವಲು ಕಾರ್ಯಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅಮೆರಿಕ, ಈ ವಿಷಯವಾಗಿ ಭಿನ್ನಾಭಿಪ್ರಾಯ ಇದ್ದಲ್ಲಿ ಉಭಯ ದೇಶಗಳ ಗುಪ್ತಚರ ಸಂಸ್ಥೆಗಳು ಅವುಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರೊಂದಿಗಿನ ಸಭೆ ಬಳಿಕ ಗುರುವಾರ ರಾತ್ರಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ಮಿತ್ರ ರಾಷ್ಟ್ರದ ಮೇಲೆ ಬೇಹುಗಾರಿಕೆ ಮಾಡುವುದು ಸರಿಯಲ್ಲ. ಇದನ್ನು ಒಪ್ಪುವುದಕ್ಕೂ ಸಾಧ್ಯವಿಲ್ಲ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು.
2010ರಲ್ಲಿ ಬಿಜೆಪಿ ಮುಖಂಡರ ಮೇಲೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ರಹಸ್ಯ ನಿಗಾವಿಟ್ಟಿದ್ದ ವಿಷಯವನ್ನು ಸಂಸ್ಥೆ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್್ ಬಹಿರಂಗಪಡಿಸಿದ್ದರು.
‘ರಹಸ್ಯ ನಿಗಾ ವಿಷಯ ಪತ್ರಿಕೆಗಳಲ್ಲಿ ವರದಿಯಾದಾಗ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು ಎನ್ನುವುದನ್ನು ನಾನು ಕೆರಿ ಗಮನಕ್ಕೆ ತಂದೆ’ ಎಂದು ಸುಷ್ಮಾ ಹೇಳಿದರು.
ಅಮೆರಿಕದ ಕಣ್ಗಾವಲು ಕಾರ್ಯಕ್ರಮವನ್ನು ಸಮರ್ಥಿಸಿಕೊಂಡ ಕೆರಿ, ‘ಭಾರತದೊಂದಿಗಿನ ನಮ್ಮ ಸಂಬಂಧವನ್ನು ಗೌರವಿಸುತ್ತೇವೆ. ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಉಭಯ ದೇಶಗಳ ಮಧ್ಯೆ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೂ ನಾವು ಬೆಲೆ ಕೊಡುತ್ತೇವೆ’ ಎಂದು ಹೇಳಿದರು.
ಐಐಟಿಗೆ ಕೆರಿ ಭೇಟಿ: ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಎರಡು ಪ್ರಯೋಗಾಲಯಗಳಿಗೆ ಭೇಟಿ ನೀಡಿದ ಜಾನ್ ಕೆರಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.