ದೊಡ್ಡಬಳ್ಳಾಪುರ: ತಾಲ್ಲೂಕಿನ ಹಲವಾರು ಕಡೆ ರಾಗಿ ಬೆಳೆಗೆ ಗೇಣು ಹುಳುಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಇಳುವರಿ ಕುಸಿತದ ಭೀತಿ ರೈತರಿಗೆ ಎದುರಾಗಿದೆ.
ಕಸಬಾ ಹೋಬಳಿ ಆಲಹಳ್ಳಿ, ಮಜರಾಹೊಸಹಳ್ಳಿ ಮತ್ತಿತರೆ ಕಡೆ ರಾಗಿ ಬೆಳೆದಿರುವ ಹೊಲಗಳಲ್ಲಿ ಗೇಣು ಹುಳುಗಳ ಕಾಟ ಹೆಚ್ಚಾಗಿದೆ. ಬೆಳಗಿನ ವೇಳೆ ಗಿಡದ ಮೇಲೆ ಈ ಹುಳುಗಳು ಕಾಣಿಸಿಕೊಂಡು, ಮಧ್ಯಾಹ್ನದ ನಂತರ ರಾಗಿ ಪೈರುಗಳ ಬುಡದಲ್ಲಿ ಸೇರಿಕೊಳ್ಳುತ್ತಿವೆ. ಇದರಿಂದ ರಾಗಿ ಗಿಡದ ಬುಡ ಸತ್ವಹೀನವಾಗಿ ಒಣಗುತ್ತಿವೆ.
ಇನ್ನೂ ತೆನೆ ಬಿಡದ ರಾಗಿ ಪೈರುಗಳಲ್ಲಿ, ಗೇಣು ಹುಳುಗಳು ಹೆಚ್ಚಾಗಿದ್ದು, ಪೈರುಗಳು ಹಾಳಾಗುತ್ತಿವೆ. ಸಾಮಾನ್ಯ ಔಷಧಿಗಳು ಕೆಲಸ ಮಾಡಿಲ್ಲ. ಒಂದು ಎಕರೆಯಲ್ಲಿ ಬೆಳೆದಿರುವ ರಾಗಿ ಬೆಳೆ ಎಲ್ಲಿ ಕೈತಪ್ಪಿಹೋಗುವುದೋ ಎನ್ನುವ ಆತಂಕ ಎದುರಾಗಿದೆ ಎನ್ನುತ್ತಾರೆ ರೈತ ಮಂಜುನಾಥ್.
ಸಾಮಾನ್ಯವಾಗಿ ತಡವಾಗಿ ಬಿತ್ತನೆ ಮಾಡಿದ ರಾಗಿ ಬೆಳೆಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಗೇಣು ಹುಳುಗಳು ಕಾಣಿಸಿಕೊಳ್ಳುತ್ತವೆ. ಅಲಸಂದಿ ಮತ್ತಿತರೆ ಕಾಳು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಈ ಹುಳುಗಳು ರಾಗಿ ಬೆಳೆಗೂ ವ್ಯಾಪಿಸುತ್ತವೆ. ಹುಳುಗಳ ನಿಯಂತ್ರಣಕ್ಕೆ ಕ್ಲೋರ್ಪಿರಿಫೋಸ್ ಔಷಧಿಯನ್ನು ಒಂದು ಲೀಟರ್ಗೆ ೨ ಮಿಲೀನಷ್ಟು ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸದರೆ ಹುಳುಗಳು ನಾಶವಾಗುತ್ತವೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮಂಜುನಾಥ್ ಸಲಹೆ ನೀಡುತ್ತಾರೆ.