ಸ್ಥಳೀಯವಾಗಿ ಬೆಳೆಯುವ ಸಿರಿ ಧಾನ್ಯಗಳನ್ನು ಪಡಿತರ ವ್ಯವಸ್ಥೆ ಒಳಗೊಳ್ಳಬೇಕು ಎನ್ನುವುದು ನಾಗರಿಕ ಸಮಾಜದ ಬಹುಕಾಲದ ಅಹವಾಲು. ಪಡಿತರದಲ್ಲಿ ಸಿರಿಧಾನ್ಯ ನೀಡುವ ಮಹತ್ತರ ತೀರ್ಮಾನವನ್ನು ಕೇಂದ್ರ ಸರ್ಕಾರ ಕಳೆದ ವರ್ಷವಷ್ಟೇ ಕೈಗೊಂಡಿತು. ರಾಜ್ಯ ಸರ್ಕಾರ ತನ್ನ ‘ಅನ್ನಭಾಗ್ಯ’ ಯೋಜನೆಯಲ್ಲಿ ರಾಗಿ ಮತ್ತು ಜೋಳ ವಿತರಿಸಲು ತೀರ್ಮಾನಿಸಿ ಈ ಧಾನ್ಯಗಳಿಗೆ ಕಳೆದ ವರ್ಷ ಕೆ.ಜಿ.ಗೆ ರೂ. ೧೮ ಬೆಂಬಲ ಬೆಲೆ ಘೋಷಿಸಿತು.
ರಾಜ್ಯದಲ್ಲಿ ರಾಗಿ, ಜೋಳದ ತೀವ್ರ ಕೊರತೆ ಉಂಟಾಗಿದ್ದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಮುಂತಾದ ಆಹಾರ ಭದ್ರತೆಯ ಕಾರ್ಯಕ್ರಮಗಳಿಗೆ ವರ್ಷಕ್ಕೆ ೩೫ ಲಕ್ಷ ಟನ್ ಆಹಾರ ಧಾನ್ಯ ಅಗತ್ಯವಿದೆ. ಖರೀದಿಗೆ ಲಭ್ಯವಿರುವುದು ಸುಮಾರು ೧೦ ಲಕ್ಷ ಟನ್ ಮಾತ್ರ ಎಂದು ಸರ್ಕಾರವೇ ಹೇಳಿಕೊಂಡಿದೆ.
ಈ ವರ್ಷ ಮುಂಗಾರು ಮಳೆ ಕೈಕೊಟ್ಟು ರಾಜ್ಯದಾದ್ಯಂತ ಜೋಳದ ಬಿತ್ತನೆ ಕುಂಠಿತಗೊಂಡಾಗ ಸರ್ಕಾರ ರಾಗಿಗೆ ಉತ್ತೇಜನ ನೀಡಲು ಮುಂದಾಯಿತು. ಬಿತ್ತನೆಗೆ ಮೊದಲೇ ರಾಗಿಗೆ ಕೆ.ಜಿ.ಗೆ ರೂ. ೨೦ ಬೆಂಬಲ ಬೆಲೆ ಘೋಷಿಸಿತು. ರಾಗಿ ಉತ್ಪಾದನೆಯನ್ನು ಅಧಿಕಗೊಳಿಸಲು ‘ಡಿಎನ್ಎ ಸೀಕ್ವೆನ್ಸಿಂಗ್’ ತಂತ್ರಜ್ಞಾನದಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿ ಮಾಡುವ ಬಗೆಗೆ ಕೃಷಿ ಸಚಿವರು ಹೇಳಿಕೆ ಕೊಟ್ಟರು.
ಇತ್ತೀಚೆಗೆ ರಚನೆಯಾದ ‘ಕೃಷಿ ಬೆಲೆ ಆಯೋಗ’ವು ರಾಜ್ಯದಲ್ಲಿ ರಾಗಿ, ಜೋಳಗಳ ಉತ್ಪಾದನೆ ಹೆಚ್ಚು ಮಾಡುವುದು ಹೇಗೆ? ಬೆಂಬಲ ಬೆಲೆಯನ್ನು ಯಾವ ಮಾನದಂಡದ ಮೇಲೆ ನಿಗದಿಪಡಿಸಬೇಕು? ಎಂಬಿತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಚರ್ಚೆ ಪ್ರಾರಂಭಿಸಿದೆ. ಈ ಆಯೋಗದಿಂದ ರೈತರು ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಕೃಷಿ ಬೆಲೆ ಆಯೋಗವು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳ ಜೊತೆಗೂಡಿ ರಾಜ್ಯದಲ್ಲಿ ರಾಗಿ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಯಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಿತು.
ಕಳೆದ ೮–-೧೦ ವರ್ಷಗಳಲ್ಲಿ ರಾಜ್ಯದಲ್ಲಿ ರಾಗಿ ಬೆಳೆಯುವ ಪ್ರದೇಶ ಐದು ಲಕ್ಷ ಹೆಕ್ಟೇರಿನಿಂದ ಒಂದು ಲಕ್ಷ ಹೆಕ್ಟೇರಿಗೆ ಇಳಿದಿದೆ. ಆದರೆ ಹೆಕ್ಟೇರುವಾರು ಉತ್ಪಾದನೆ ಇಳಿಮುಖವಾಗಿಲ್ಲ. ಸದ್ಯ ರಾಗಿಯಲ್ಲಿ ಸಾಕಷ್ಟು ಉತ್ತಮ ಇಳುವರಿ ಕೊಡುವ ಬೀಜಗಳಿವೆ. ರೈತರು ಸುಮಾರು ೮ ಸುಧಾರಿತ ತಳಿಗಳನ್ನು ಬಳಸುತ್ತಿದ್ದಾರೆ. ಡಿಎನ್ಎ ಸೀಕ್ವೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ರಾಗಿ, ಜೋಳದ ಹೊಸ ತಳಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಗಿಯ ಉತ್ಪಾದನೆಗೆ ರೈತರನ್ನು ಉತ್ತೇಜಿಸಲು ರಾಗಿ ಬೆಳೆಯುವ ೧೩ ಜಿಲ್ಲೆಗಳಲ್ಲಿ ಹೆಕ್ಟೇರಿಗೆ ರೂ. ೩೦೦೦ ಮೌಲ್ಯದ ಬೀಜ, ಗೊಬ್ಬರ (ಸಾವಯವ), ಜಿಪ್ಸಂ ಇತ್ಯಾದಿಗಳನ್ನು ರೈತರಿಗೆ ಒದಗಿಸಲು ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದೆ. ಈ ವರ್ಷ ೧೦೦ ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಇದನ್ನು ಕೈಗೊಳ್ಳಲಾಗುವುದು ಎಂದು ಆ ಕಾರ್ಯಾಗಾರದಲ್ಲಿ ಘೋಷಿಸಲಾಯಿತು.
ಇಲ್ಲಿ ಕೆಲ ಗಂಭೀರ ತೊಡಕುಗಳಿವೆ. ರಾಗಿ ಉತ್ಪಾದನೆ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆಯ ಜೊತೆಗೆ, ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ ರಾಗಿ ಬೆಳೆಯುವ ಪ್ರದೇಶ ಐದು ಲಕ್ಷ ಹೆಕ್ಟೇರಿನಿಂದ ಒಂದು ಲಕ್ಷ ಹೆಕ್ಟೇರಿಗೆ ಕುಗ್ಗಿದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ಉತ್ಪಾದನಾ ವೆಚ್ಚ ಹೆಚ್ಚು, ಬೇಡಿಕೆ ಕಡಿಮೆ ಎನ್ನುವ ಕಾರಣಕ್ಕೆ ರೈತರು ರಾಗಿ ಬೇಸಾಯದಿಂದ ವಿಮುಖರಾಗಿದ್ದಾರೆ ಎಂಬುದು ಸರ್ಕಾರದ ವಿವರಣೆ. ಹಾಗಾದರೆ ರಾಗಿ ಬೆಳೆಯುತ್ತಿದ್ದ ಜಮೀನುಗಳು ಈಗ ಏನು ಬೆಳೆಯುತ್ತಿವೆ? ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮೈದಳೆದ ಮೇಲೆ, ಅತಿಯಾದ ಸಬ್ಸಿಡಿ, ಒತ್ತಾಸೆಗಳ ಭರಾಟೆಯಲ್ಲಿ ರಾಗಿ ಬೆಳೆಯುವ ಜಮೀನುಗಳು ಯಾವ ವೇಗದಲ್ಲಿ ತೋಟಗಾರಿಕೆ ಕ್ಷೇತ್ರಗಳಾಗಿ ಪರಿವರ್ತನೆಗೊಂಡವು ಎನ್ನುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಬೆಂಗಳೂರು ಆಸುಪಾಸಿನ ೬–-೭ ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷದಲ್ಲಿ ಬಹುತೇಕ ಎಲ್ಲಾ ರಾಗಿ ಜಮೀನುಗಳು ಮಾವು, ಸಪೋಟ, ತೆಂಗು, ಅಡಿಕೆ, ಎಲೆಬಳ್ಳಿ, ತರಕಾರಿ ತೋಟಗಳಾಗಿವೆ. ಐದು ಎಕರೆ ಜಮೀನಿರುವ ಸಾಮಾನ್ಯ ರೈತರು ತಮ್ಮ ಮನೆ ಬಳಕೆ ಮತ್ತು ಜಾನುವಾರು ಹುಲ್ಲಿಗಾಗಿ ರಾಗಿ ಬೆಳೆಯಲು ಅರ್ಧದಿಂದ ಒಂದು ಎಕರೆಯಷ್ಟು ಮಾತ್ರ ಜಮೀನು ಇಟ್ಟುಕೊಂಡು ಉಳಿದದ್ದನ್ನು ತೋಟಗಾರಿಕೆ ಕ್ಷೇತ್ರವಾಗಿ ಪರಿವರ್ತಿಸಿದ್ದಾರೆ.
ಅಲ್ಲದೆ ಸರ್ಕಾರ ಅತಿಯಾಗಿ ಉತ್ತೇಜಿಸಿದ ನೀಲಗಿರಿ, ಸರ್ವೆ, ಸಿಲ್ವರ್ ಓಕ್, ತೇಗಗಳು, ಧಾನ್ಯ ಬೆಳೆಯುವ ಹೊಲಗಳನ್ನು ಆವರಿಸಿವೆ. ಸರ್ಕಾರ ಇಂದು ರಾಗಿಗೆ ಏನೇ ಬೆಲೆ ಕೊಟ್ಟರೂ ಹಣ್ಣಿನ ಮರಗಳನ್ನು, ಅಡಿಕೆ, ತೆಂಗುಗಳನ್ನು ಕಡಿದು ಯಾರೂ ರಾಗಿ ಬೆಳೆಯಲಾರರು. ಈ ವಾಸ್ತವವನ್ನು ಬೆಲೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಹೊಸ ತಳಿ ಬೀಜ ಅಭಿವೃದ್ಧಿಪಡಿಸುವ ಮೂಲಕ ರಾಗಿ ಉತ್ಪಾದನೆ ಹೆಚ್ಚಿಸಬಹುದು ಎಂದಷ್ಟೇ ಯೋಚಿಸುತ್ತಿರುವ ಕೃಷಿ ವಿ.ವಿಯಂತೂ ಇದನ್ನು ಅವಶ್ಯವಾಗಿ ನೋಡಬೇಕು.
ದಶಕಗಳಿಂದ ಸರ್ಕಾರದ ನೀತಿಗಳು ಕಿರುಧಾನ್ಯಗಳ ಬೇಸಾಯವನ್ನು ವ್ಯವಸ್ಥಿತವಾಗಿ ನಿರುತ್ತೇಜಿಸುತ್ತಾ ಬಂದು ಈಗ ಏಕಾಏಕಿ ರಾಗಿ ಉತ್ಪಾದನೆ ಹೆಚ್ಚು ಮಾಡಬೇಕೆಂದರೆ ಹೇಗೆ ಸಾಧ್ಯ?
ಸಾಂಪ್ರದಾಯಿಕವಾಗಿ ರಾಗಿ ಬೆಳೆಯುವ ಜಿಲ್ಲೆಗಳಿಗೆ ಗಮನವನ್ನು ಕೇಂದ್ರೀಕರಿಸುವುದರ ಬದಲು ಇತರ ಜಿಲ್ಲೆಗಳತ್ತಲೂ ನೋಡಬೇಕಾಗುತ್ತದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಅಲ್ಲಿನ ಜನ ಸಾಮಾನ್ಯವಾಗಿ ರಾಗಿ ಉಣ್ಣುವುದಿಲ್ಲ; ಬೆಳೆದದ್ದನ್ನೆಲ್ಲ ಮಾರಾಟ ಮಾಡುತ್ತಾರೆ. ಆದರೆ ರಾಗಿ ಬೇಸಾಯದ ಅವರ ಪದ್ಧತಿಗಳಲ್ಲಿ ಸಾಕಷ್ಟು ಸುಧಾರಣೆಗೆ ಅವಕಾಶವಿದೆ. ಈ ಜಿಲ್ಲೆಗಳಲ್ಲಿ ರಾಗಿ ಬೇಸಾಯದ ಉತ್ತಮ ಪದ್ಧತಿಗಳನ್ನು ಪರಿಚಯಿಸಿ, ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ್ದಾದರೆ ಅಧಿಕ ಪ್ರಮಾಣದ ರಾಗಿ ಸಂಗ್ರಹಣೆ ಸಾಧ್ಯತೆ ಇದೆ.
ಕೃಷಿ ಇಲಾಖೆಯು ರಾಗಿ ಇಳುವರಿ ಹೆಚ್ಚಿಸಲು ಮುಂದಿಡುತ್ತಿರುವ, ಹೆಕ್ಟೇರಿಗೆ ರೂ. ೩೦೦೦ ಮೊತ್ತದ ಬಿತ್ತನೆ ಬೀಜ, ಗೊಬ್ಬರ, ಜಿಪ್ಸಂ ಇತ್ಯಾದಿಗಳನ್ನು ಒಳಗೊಂಡ ಪ್ಯಾಕೇಜ್ ಅನೇಕ ವರ್ಷಗಳಿಂದ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಕಾರ್ಯಕ್ರಮವೇ ಹೊರತು ಹೊಸತೇನಲ್ಲ. ಮೊದಲು ಡಿಎಪಿ ಇದ್ದದ್ದು ಈಗ ಸಾವಯವ ಗೊಬ್ಬರ ಆಗಿರುವುದಷ್ಟೆ ವ್ಯತ್ಯಾಸ. ಇಂಥ ಪ್ಯಾಕೇಜ್ ರೈತರ ತಿರಸ್ಕಾರಕ್ಕೆ ಒಳಗಾಗಿದೆ. ಇಂತಹ ಪ್ಯಾಕೇಜ್ ನೀಡಿದ ಮಾತ್ರಕ್ಕೆ ರೈತರು ಮುಗಿಬಿದ್ದು ರಾಗಿ ಬೆಳೆಯುತ್ತಾರೆ ಎನ್ನುವ ಭ್ರಮೆಯಿಂದ ಸರ್ಕಾರ ಹೊರಬರಬೇಕು.
ಬೆಲೆ ಆಯೋಗ ಯಾವ ಕಾರಣಕ್ಕೂ ಇಲಾಖೆಯ ಈ ಪ್ಯಾಕೇಜ್ ಸಂಸ್ಕೃತಿಗೆ ಸೊಪ್ಪು ಹಾಕಕೂಡದು. ಒಂದು ಎಕರೆ ರಾಗಿಯ ಉತ್ಪಾದನಾ ವೆಚ್ಚ ರೂ. ೨೧ ಸಾವಿರ ಎಂದು ಸರ್ಕಾರದ ಅಂಕಿ ಅಂಶವೇ ಹೇಳುವಾಗ, ಪ್ಯಾಕೇಜ್ನಿಂದ ರೈತರಿಗೆ ಏನು ಫಲ? ಇದರ ಬದಲು ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ಕನಿಷ್ಠ ಶೇ ೫೦ರ ಸಬ್ಸಿಡಿಯಲ್ಲಿ ಪ್ರತಿ ರೈತರಿಗೂ ಒದಗಿಸಿದರೆ ಸಹಾಯವಾಗುತ್ತದೆ. ಗೊಬ್ಬರ, ಜಿಪ್ಸಂಗಳಿಗೆ ಕಂಪೆನಿಗಳಿಗೆ ಗುತ್ತಿಗೆ ಕೊಡುವ ಬದಲು, ತಮಗೆ ಅನುಕೂಲವಾದ ಸಾವಯವ ಗೊಬ್ಬರ ಹೊಂದಿಸಿಕೊಳ್ಳಲು ರೈತರಿಗೆ ನೇರ ಒತ್ತಾಸೆ ನೀಡಿದರೆ ಸಾಕು. ಪ್ರತಿ ಕೆ.ಜಿ ರಾಗಿಗೆ ಕನಿಷ್ಠ ರೂ. ೩೦ ಬೆಂಬಲ ಬೆಲೆ ಘೋಷಿಸಬೇಕು.
ರಾಗಿ ಖರೀದಿಗೂ ಸೂಕ್ತ ಆದ್ಯತೆ ಕೊಡಬೇಕಾದ್ದು ಅಗತ್ಯ. ಬೆಂಬಲ ಬೆಲೆ ಘೋಷಣೆ ಮಾಡುವ ಜೊತೆಗೆ ಅದು ಎಲ್ಲಾ ರೈತರಿಗೆ
ಸಿಗುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ, ಅದಿಲ್ಲದಿದ್ದರೆ ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು, ಸಮುದಾಯ ಆಧಾರಿತ ಸಂಸ್ಥೆಗಳಿಗೆ, ರೈತ ಗುಂಪುಗಳಿಗೆ ಇದರ ಜವಾಬ್ದಾರಿ ಕೊಡುವುದರಿಂದ ಎಲ್ಲಾ ರೈತರೂ ಬೆಂಬಲ ಬೆಲೆ ಲಾಭವನ್ನು ಪಡೆಯಲು ಸಾಧ್ಯವಾದೀತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.