ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ರಾಮಕಥಾ ಗಾಯಕಿ ಜೊತೆ 169 ಬಾರಿ ದೇಹ ಸಂಬಂಧ ಬೆಳೆಸುವ ಮೂಲಕ 4 ವರ್ಷ ಲೈಂಗಿಕ ಸುಖ ಪಡೆದಿದ್ದಾರೆ. ಇದು ಸನ್ಯಾಸಾಶ್ರಮಕ್ಕೆ ವಿರುದ್ಧವಾದ ನಡೆ. ಆದ್ದರಿಂದ ಶ್ರೀಗಳು ಮಠದ ಕಾರ್ಯಭಾರ ನಿರ್ವಹಿಸದಂತೆ ತಡೆ ನೀಡಬೇಕು’ ಎಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು ಗುರುವಾರ ಅಂಗೀಕರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿತು. ಎದುರ್ಕಳ ಈಶ್ವರ ಭಟ್ಟ ಹಾಗೂ ಇತರ ಐವರು ಈ ಅರ್ಜಿ ಸಲ್ಲಿಸಿದ್ದಾರೆ.
‘ಶ್ರೀಮಠದ ವ್ಯವಹಾರಗಳಲ್ಲಿ ತೆರಿಗೆ ವಂಚನೆ ಸೇರಿದಂತೆ ಅನೇಕ ಅಕ್ರಮಗಳು ಜರುಗಿವೆ. ಈ ಎಲ್ಲಾ ಕಾರಣಕ್ಕಾಗಿ ನಿಷ್ಠಾವಂತ ಭಕ್ತರು, ಸರ್ಕಾರದ ಅಧಿಕಾರಿಗಳು, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಥವಾ ಇದೇ ಹೈಕೋರ್ಟ್ ಸೂಚಿಸುವವರು ಶ್ರೀಮಠದ ಆಡಳಿತವನ್ನು ನಿರ್ವಹಣೆ ಮಾಡುವಂತೆ ನ್ಯಾಯಪೀಠವು ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಲಾಗಿದೆ.
ತುರ್ತು ನೋಟಿಸ್ ಜಾರಿಗೆ ಆದೇಶ
ಬೆಂಗಳೂರು: ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪದಿಂದ ಕೈಬಿಟ್ಟ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಶ್ರೀಗಳಿಗೆ ತುರ್ತು ನೋಟಿಸ್ ಜಾರಿ ಮಾಡಲು ಹೈಕೋರ್ಟ್ ಆದೇಶಿಸಿದೆ.