ಶಿವಮೊಗ್ಗ: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಸಾಗರ ತಾಲ್ಲೂಕು ಸಿಗಂದೂರು ಚೌಡಮ್ಮ ದೇವಾಲಯದಲ್ಲಿ ಆಯೋಜಿಸಿರುವ 25ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ದೇವಾಲಯದ ಭಕ್ತರು ಸೋಮವಾರ ಪೂರ್ವ ವಲಯ ಐಜಿಪಿ ನಂಜುಂಡಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮಂಗಳೂರು ಹಾಗೂ ಉಪ್ಪಿನಂಗಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸದಂತೆ ಧಾರ್ಮಿಕ ದತ್ತಿ ಆಯುಕ್ತರು ನಿಷೇಧ ಹೊರಡಿಸಿದ್ದರು.
ಏ.13ರಿಂದ 19ರವರೆಗೆ ಸಿಗಂದೂರು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶ್ರೀಗಳು ಪಾಲ್ಗೊಳ್ಳುವ ಬಗ್ಗೆಯೂ ವಿರೋಧ ವ್ಯಕ್ತವಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಐಜಿಪಿ ಅವರು, ಪರ–-ವಿರುದ್ಧ ಹೇಳಿಕೆ, ದೂರುಗಳು ಬಂದಿವೆ. ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ದೇವಸ್ಥಾನದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ದೂಗೂರು ಪರಮೇಶ್ವರ, ಕೃಷ್ಣಪ್ಪ, ರಮೇಶ್, ಇಂದ್ರಮ್ಮ, ಉಮೇಶ್, ಸುಧಾಕರ್ ಮನವಿ ಸಲ್ಲಿಸಿದರು.