ರಾಯಬರೇಲಿ (ಪಿಟಿಐ); ಪತಿ ವಾಧ್ರಾ ಹಾಗೂ ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ರಾಜಕೀಯ ವಾಗ್ದಾಳಿಗಳಿಂದ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಮಂಗಳವಾರ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ರಾಜಕೀಯ ವಾಗ್ದಾಳಿಗಳಿಗೆ ನಾನು ಅಂಜುವುದಿಲ್ಲ, ಇದಕ್ಕೆಲ್ಲಾ ಹೇಗೆ ಉತ್ತರಿಸ ಬೇಕು ಮತ್ತು ನಿಭಾಯಿಸಬೇಕು ಎಂಬುದನ್ನು ಇಂದಿರಾಜೀ ಅವರಿಂದ ಕಲಿತ್ತಿದ್ದೇನೆ ಎಂದು ಪ್ರಿಯಾಂಕಾ ತಿಳಿಸಿದರು.
ರಾಯಬರೇಲಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಸುಳ್ಳು ಆರೋಪಗಳಿಗೆ ನಾನು ಎದೆಗುಂದುವುದಿಲ್ಲ ಎಂದು ಪ್ರಿಯಾಂಕಾ ಗುಡುಗಿದರು.
ವಿರೋಧ ಪಕ್ಷಗಳು ಪತಿ ವಾಧ್ರಾ ಮತ್ತು ನನ್ನ ಕುಟುಂಬದ ವಿರುದ್ಧ ವಿನಾ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಇದರಿಂದ ಅವರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಕೇ ವಿನಾ ಕುಟುಂಬ ಮತ್ತು ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡಬಾರದು ಎಂದು ಪ್ರಿಯಾಂಕಾ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.