ಜೋದ್ಪುರ (ಪಿಟಿಐ): ಅತ್ಯಾಚಾರ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು 3ನೇ ತರಗತಿ ಪಠ್ಯಪುಸ್ತಕದಲ್ಲಿ ‘ಮಹಾನ್ ಸಂತ’ನ ಗೌರವ ಪಡೆದಿದ್ದಾರೆ.
ಜೋದ್ಪುರ ಜೈಲಿನಲ್ಲಿರುವ ಅಸಾರಾಂ ಅವರು ರಾಜಸ್ತಾನದ ಪಠ್ಯ ಪುಸ್ತಕದಲ್ಲಿ ಸ್ವಾಮಿವಿವೇಕಾನಂದ, ಮದರ್ ತೆರೆಸಾ, ರಾಮಕೃಷ್ಣ ಪರಮಹಂಸರ ಪಠ್ಯದ ಜೊತೆ ಸ್ಥಾನ ಪಡೆದಿದ್ದಾರೆ. ಇವರ ಜೊತೆ ಯೋಗಗುರು ಬಾಬಾ ರಾಮದೇವ್ ಅವರ ಬಗ್ಗೆಯೂ ಒಂದು ಅಧ್ಯಾಯವಿದೆ.
ನೈತಿಕ ಶಿಕ್ಷಣ ಮತ್ತು ಸಾಮಾನ್ಯ ಜ್ಞಾನ ಪಠ್ಯಪುಸ್ತಕದಲ್ಲಿರುವ ಅಸಾರಾಂ ಅವರ ಪಠ್ಯವನ್ನು 3ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ.
ರಾಜಸ್ತಾನದ ಹಲವು ಜಿಲ್ಲೆಗಳಲ್ಲಿ ಬೋಧನೆ ಮಾಡಲಾಗುತ್ತಿದ್ದ ಈ ಪುಸ್ತಕವನ್ನು ದೆಹಲಿ ಮೂಲದ ಪ್ರಕಾಶನ ಸಂಸ್ಥೆ ಸರಬರಾಜು ಮಾಡುತ್ತಿತ್ತು.
ರಾಜಸ್ತಾನದ ಶಿಕ್ಷಣ ಇಲಾಖೆ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದೆ. ಅಸಾರಾಂ ಅವರ ಪಠ್ಯವನ್ನು ಪುಸ್ತಕದಿಂದ ತೆಗೆದು ಹಾಕಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.