ಮಹದೇವಪುರ: ‘ರಾಜಕಾಲುವೆಗಳ ಒತ್ತುವರಿ ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆಗಳು ರಾಜಾರೋಷವಾಗಿ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿವೆ. ಹೀಗಾಗಿ ಬೆಂಗಳೂರಿನಲ್ಲಿರುವ ಬಹುತೇಕ ಕೆರೆಗಳಿಗೆ ಶುದ್ಧ ನೀರು ಬರುವುದು ಅಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ ಹೇಳಿದರು.
ಸೀತಾರಾಂಪಾಳ್ಯ ಕೆರೆಯಲ್ಲಿ ಬುಧವಾರ ಟ್ರಾಪಿಕಲ್ ರಿಸರ್ಚ್ ಡೆವಲಪ್ಮೆಂಟ್ ಸೆಂಟರ್ ಸಂಸ್ಥೆ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಳೆಗಾಲದಲ್ಲಿ ಮಳೆ ನೀರು ರಾಜಕಾಲುವೆಗಳ ಮೂಲಕ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಅದಕ್ಕಾಗಿ ಒತ್ತುವರಿಗೊಂಡ ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಕೆರೆಗೆ ಘನತ್ಯಾಜ್ಯ ಬಂದು ಬೀಳುವುದನ್ನು ತಡೆಗಟ್ಟಬೇಕು’ ಎಂದು ಹೇಳಿದರು.
‘ಈ ಹಿಂದೆ ಬೆಂಗಳೂರಿನಲ್ಲಿ ನೂರಾರು ಕೆರೆಗಳು ಇದ್ದವು. ಆದರೆ, ಇಂದು ಕೇವಲ 85 ಕೆರೆಗಳು ಮಾತ್ರ ಲೆಕ್ಕಕ್ಕೆ ಸಿಗುತ್ತಿವೆ. ಅವೆಲ್ಲವೂ ಸಂಪೂರ್ಣವಾಗಿ ಕಲುಷಿತಗೊಂಡಿವೆ. ಅವುಗಳನ್ನು ಸಂರಕ್ಷಿಸಬೇಕೆಂದರೆ ಪ್ರತಿಯೊಂದು ಕೆರೆಯ ಬಳಿ ಕೊಳಚೆ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕು. ಆಗ ಮಾತ್ರ ಕೆರೆಗಳಿಗೆ ಸೇರುವ ಕೊಳಕು ನೀರನ್ನು ತಡೆಗಟ್ಟಬಹುದು’ ಎಂದು ಅವರು ತಿಳಿಸಿದರು.
‘ಕೆರೆಯಲ್ಲಿನ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗಳಿಗೆ ಬಳಸುವುದರಿಂದಲೂ ಕೆರೆಯ ಅಂತರ್ಜಲಕ್ಕೆ ಬಲವಾದ ಪೆಟ್ಟು ಬೀಳುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರ ಹೆಚ್ಚು ಗಮನಹರಿಸಬೇಕು. ಮುಖ್ಯವಾಗಿ ಸಾರ್ವಜನಿಕರು ಕೆರೆಯ ಸಂರಕ್ಷಣೆಗೆ ಕೈಜೋಡಿಸಬೇಕು’ ಎಂದರು.
ಟ್ರಾಪಿಕಲ್ ರಿಸರ್ಚ್ ಡೆವಲಪ್ಮೆಂಟ್ ಸೆಂಟರ್ನ ನಿರ್ದೇಶಕ ಡಾ.ಅನಿಲ್ ಅಭಿ ಮಾತನಾಡಿ, ‘ಕಳೆದ ಎರಡು ತಿಂಗಳಿನಿಂದ ಕೆರೆಯನ್ನು ಶುಚಿಗೊಳಿಸಲಾಗುತ್ತಿದೆ. ಸದ್ಯಕ್ಕೆ ಸಾಂಕೇತಿಕವಾಗಿ ಇಪ್ಪತ್ತು ಗಿಡಗಳನ್ನು ನೆಡಲಾಗಿದೆ. ಮುಂದಿನ ಒಂಬತ್ತು ತಿಂಗಳೊಳಗಾಗಿ ಕೆರೆಯ ಸುತ್ತಮುತ್ತ 400 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗುವುದು’ ಎಂದು ತಿಳಿಸಿದರು.
ಬ್ರಿಗೇಡ್ ಗ್ರೂಪ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಪ್ರಸಾದ್ ಮಾತನಾಡಿ, ‘ಸೀತಾರಾಂಪಾಳ್ಯ ಕೆರೆಯನ್ನು ಅಭಿವೃದ್ಧಿಪಡಿಸಿಲು ತಮ್ಮ ಸಂಸ್ಥೆ ಒಂದು ಕೋಟಿ ರೂಪಾಯಿಯನ್ನು ಖರ್ಚು ಮಾಡಲಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ. ಎ.ರವೀಂದ್ರ, ಎಂ.ಆರ್.ಜೈಶಂಕರ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.