ನವದೆಹಲಿ (ಪಿಟಿಐ): ರಾಜೀವ್ ಗಾಂಧಿ ಹಂತಕ ರನ್ನು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ಕೈಗೊಂಡ ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿ, ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ಪರಾಮರ್ಶೆಗೆ ಒಪ್ಪಿಸಿದೆ.
ರಾಜೀವ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಏಳೂ ಜನರನ್ನು ಬಿಡುಗಡೆ ಮಾಡಲು ತಮಿಳು ನಾಡು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಾಂತರ ತಡೆಯಾಜ್ಞೆಯನ್ನೂ ಕೋರ್ಟ್ ಮುಂದುವರಿಸಿದೆ.
ಸುಪ್ರೀಂಕೋರ್ಟ್ನ ಈ ಕ್ರಮದಿಂದಾಗಿ ಈ ಪ್ರಕರಣದಲ್ಲಿ ಕ್ಷಮಾದಾನ ಅರ್ಜಿ ಇತ್ಯರ್ಥಗೊಳಿಸಲು ರಾಷ್ಟ್ರಪತಿ ವಿಳಂಬಗೊಳಿಸಿದ್ದರಿಂದ ಮರಣದಂಡನೆಯಿಂದ ವಿನಾಯಿತಿ ಪಡೆದಿದ್ದ ಶಾಂತನ್, ಮುರುಗನ್, ಪೇರರಿವಾಳನ್ ಹಾಗೂ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ನಳಿನಿ, ರಾಬರ್ಟ್ ಪಸಯ್, ಜಯಕುಮಾರ್ ಮತ್ತು ರವಿಚಂದ್ರನ್ ಅವರ ಜೈಲುವಾಸ ಮುಂದುವರಿಯಲಿದೆ.
ತಮ್ಮ ಅಧಿಕಾರಾವಧಿಯ ಕೊನೆಯ ದಿನ ಕೇಂದ್ರದ ಈ ಮಹತ್ವದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠದ ಮುಖ್ಯಸ್ಥ ನ್ಯಾ.
ಸದಾಶಿವಂ, ಮಾಜಿ ಪ್ರಧಾನಿ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳು ಇಡೀ ದೇಶಕ್ಕೆ ಮಹತ್ವದ್ದಾಗಿವೆ. ಅಲ್ಲದೇ ಈ ತೀರ್ಪು ದೇಶದಾದ್ಯಂತ ಕ್ರಿಮಿನಲ್ ಪ್ರಕರಣಗಳ ಇತ್ಯರ್ಥಕ್ಕೆ ದಿಕ್ಸೂಚಿಯಾಗಲಿದೆ. ಆದ್ದರಿಂದ ಈ ಪ್ರಕರಣವನ್ನು ಉನ್ನತ ಪೀಠದ ಪರಾಮರ್ಶೆಗೆ ಒಪ್ಪಿಸಲಾಗಿದೆ’ ಎಂದು ಹೇಳಿದರು.
ಸಾಂವಿಧಾನಿಕ ಪೀಠ ಈ ಪ್ರಕರಣವನ್ನು ಮೂರು ತಿಂಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದಿರುವ ಸದಾಶಿವಂ ನೇತೃತ್ವದ ನ್ಯಾಯಪೀಠ, ಆ ಪೀಠದ ಮುಂದೆ ಏಳು ಪ್ರಶ್ನೆಗಳನ್ನು ಇರಿಸಿದೆ.
ಸಾಂವಿಧಾನಿಕ ಪೀಠದ ಮುಂದೆ ಇರುವ ಪ್ರಶ್ನೆಗಳು:
*ರಾಷ್ಟ್ರಪತಿ (ಸಂವಿಧಾನದ 72ನೇ ವಿಧಿ) ಅಥವಾ ರಾಜ್ಯಪಾಲರು (161 ವಿಧಿ) ಇಲ್ಲವೆ ಸುಪ್ರೀಂಕೋರ್ಟ್ (32ನೇ ವಿಧಿ) ಒಂದು ಪ್ರಕರಣ ದಲ್ಲಿ ಕ್ಷಮಾದಾನ ನೀಡಿದ ಮೇಲೂ ಅದನ್ನು ಮತ್ತಷ್ಟು ಕಡಿಮೆ ಮಾಡಲು ಕಾರ್ಯಾಂಗಕ್ಕೆ (ಕೇಂದ್ರ, ರಾಜ್ಯ ಸರ್ಕಾರ) ಅಧಿಕಾರ ಇದೆಯೇ?
*ಮರಣದಂಡನೆಯಿಂದ ವಿನಾಯ್ತಿ ಪಡೆದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಗಳನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿ ಅವರನ್ನು ಬಂಧಮುಕ್ತರನ್ನಾಗಿಸಲು ಅವಕಾಶ ಇದೆಯೇ?
*ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯ ಜೀವ ಇರುವವರೆಗೆ ಸೆರೆವಾಸವೇ ಅಥವಾ ಜೀವಾವಧಿ ಶಿಕ್ಷೆಯೂ ಕ್ಷಮಾದಾನದ ಅಡಿಯಲ್ಲಿ ಬರುವುದೇ?
*ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಅಂತಹ ಅಪರಾಧಿಗಳ ಶಿಕ್ಷೆಯನ್ನು ಆಜೀವ ಸೆರೆ ವಾಸ ಎಂದು ಪರಿಗಣಿಸಬೇಕೇ? ಇಲ್ಲವೇ ಅದನ್ನು 14ವರ್ಷಗಳಿಗೂ ಮೀರಿದ ಜೈಲು ಶಿಕ್ಷೆ ಎಂದು ನಿರ್ಧರಿಸಬೇಕೇ? ಅಥವಾ ಇದು ಬಿಡುಗಡೆಗೆ ಅತೀತವಾದ ಪ್ರಕರಣ ಎಂದು ಪರಿಗಣಿಸಬೇಕೇ ಎಂಬುದರ ಕುರಿತೂ ನ್ಯಾಯಪೀಠ ತೀರ್ಮಾನಿಸಲಿದೆ.
*ಸಂವಿಧಾನದ ಏಳನೇ ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ಕೇಂದ್ರ ಮತ್ತು ರಾಜ್ಯಗಳ ಸಹವರ್ತಿ ಪಟ್ಟಿಯಲ್ಲಿ ನೀಡಲಾಗಿರುವ ಕ್ಷಮಾ ದಾನದ ಅಧಿಕಾರ ಚಲಾಯಿಸುವ ಹಕ್ಕು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೆಯೇ ಎಂಬುದನ್ನೂ ನ್ಯಾಯಪೀಠ ಚರ್ಚಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.