ಬೆಂಗಳೂರು: ‘ರಾಜೀವ್ ಆವಾಸ್ ಯೋಜನೆ (ಆರ್ಎವೈ) ಅಡಿಯಲ್ಲಿ ರಾಜ್ಯದಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಆರ್.ರಮೇಶ್ ಅವರು ತಿಳಿಸಿದರು.
ಮಂಡಳಿ ವತಿಯಿಂದ ನಗರದ ಲಕ್ಷ್ಮಣ್ ರಾವ್ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ 1,614 ಮನೆಗಳ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಗರದಲ್ಲಿ 597 ಕೊಳಚೆ ಪ್ರದೇಶಗಳಿವೆ. ಅವುಗಳ ಪೈಕಿ 55 ಕೊಳೆಗೇರಿ ಪ್ರದೇಶಗಳಲ್ಲಿ 13 ವಿವಿಧ ಯೋಜನೆಗಳ ಮೂಲಕ ₨ 674,28 ಕೋಟಿ ಮೊತ್ತದ 12,435 ಮನೆಗಳ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ೨೦೧೩–೧೪ ಮತ್ತು ೨೦೧೪–೧೫ನೇ ಸಾಲಿನಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ವಸತಿ ಸಚಿವ ಅಂಬರೀಷ್ ಅವರು, ‘ಆರ್ಎವೈ ಅಡಿಯಲ್ಲಿ ಕೇಂದ್ರ ಸರ್ಕಾರವು ಶೇ 50 ಅನುದಾನ ಒದಗಿಸಿದರೆ, ರಾಜ್ಯ ಸರ್ಕಾರವು ಶೇ 40ರಷ್ಟು ಹಣ ನೀಡಲಿದೆ. ಉಳಿದ ಶೇ 10 ಹಣವನ್ನು ಫಲಾನುಭವಿಗಳು ನೀಡುವ ಮೂಲಕ ವಸತಿಯನ್ನು ಪಡೆಯಬಹುದು’ ಎಂದರು.
ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ‘ಆರ್ಎವೈ ಅಡಿಯಲ್ಲಿ ಜಯರಾಜ್ ನಗರದಲ್ಲಿ 80, ಲಕ್ಷ್ಮಣ್ ರಾವ್ ನಗರದಲ್ಲಿ 534, ಅಂಬೇಡ್ಕರ್ ನಗರದಲ್ಲಿ 476, ಜೆ.ಕೆ.ಪುರದಲ್ಲಿ 256, ರುದ್ರಪ್ಪ ಗಾರ್ಡನ್ನಲ್ಲಿ 144, ನಾಗಮ್ಮ ನಗರ 80 ಮತ್ತು ಧೀನಬಂದು ನಗರದಲ್ಲಿ 44 ಮನೆಗಳ ನಿರ್ಮಾಣ ಮಾಡಲಾಗುತ್ತದೆ’ ಎಂದರು.