ನವದೆಹಲಿ: ಪರಿಹಾರ ಅರಣ್ಯೀಕರಣ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತಿರುವ ಕಾರಣ, ಅರಣ್ಯೀಕರಣ ಹಾಗೂ ಪರಿಸರ ಸಂರಕ್ಷಣೆಗೆ ಕರ್ನಾಟಕಕ್ಕೆ ಕೇಂದ್ರದಿಂದ ₹ 917 ಕೋಟಿ ಸಿಗಲಿದೆ.
ಮೂಲಸೌಕರ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಬಳಸಿಕೊಂಡಿರುವ ತಮಿಳುನಾಡು (₹106 ಕೋಟಿ), ಕೇರಳ (₹ 76 ಕೋಟಿ), ಆಂಧ್ರಪ್ರದೇಶ (₹ 2,223 ಕೋಟಿ) ಮತ್ತು ಮಹಾರಾಷ್ಟ್ರ (₹ 2,435 ಕೋಟಿ) ರಾಜ್ಯಗಳಿಗೂ ಕೇಂದ್ರದಿಂದ ಹಣಕಾಸಿನ ಅನುದಾನ ಸಿಗಲಿದೆ.
ಒಡಿಶಾ, ಛತ್ತೀಸಗಡ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಿಗೆ ತಲಾ ₹ 3 ಸಾವಿರ ಕೋಟಿಗಿಂತ ಹೆಚ್ಚು ಹಣ ಸಿಗಲಿದೆ. ಒಡಿಶಾಕ್ಕೆ ಅಂದಾಜು ₹ 6 ಸಾವಿರ ಕೋಟಿ ಸಿಗಲಿದೆ ಎನ್ನಲಾಗಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರಿಹಾರ ಅರಣ್ಯೀಕರಣ ನಿಧಿ ಹಾಗೂ ಈ ನಿಧಿಯ ನಿರ್ವಹಣೆಗೆ ಪ್ರಾಧಿಕಾರ ರಚಿಸಬೇಕು ಎಂದು ಮಸೂದೆ ಹೇಳುತ್ತದೆ. ಯೋಜನೆಗಳಿಗೆ ಅರಣ್ಯ ಜಮೀನು ಬಳಸಿಕೊಳ್ಳುವವರು ನಿಧಿಗೆ ಹಣ ಕೊಡಬೇಕಾಗುತ್ತದೆ.
ಈ ನಿಧಿಯಲ್ಲಿ ಈಗ ₹ 42 ಸಾವಿರ ಕೋಟಿ ಇದೆ. ಇದು ಸುಪ್ರೀಂ ಕೋರ್ಟ್ ಕಣ್ಗಾವಲಿನಲ್ಲಿದೆ. ನಿಧಿಗೆ ಪ್ರತಿ ವರ್ಷ ₹ 6 ಸಾವಿರ ಕೋಟಿ ಸಿಗುವ ಸಾಧ್ಯತೆ ಇದೆ. ಮಸೂದೆಗೆ ರಾಜ್ಯಸಭೆ ಶುಕ್ರವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಲೋಕಸಭೆ ಈ ಹಿಂದೆಯೇ ಅಂಗೀಕಾರ ನೀಡಿತ್ತು.