ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ಸಂಬಂಧ ಕರ್ನಾಟಕ ಸರ್ಕಾರ ಹೊರತಂದಿರುವ ಕಿರುಹೊತ್ತಿಗೆಯಲ್ಲಿ ತನ್ನ ರಾಜ್ಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ, ಅನ್ಯ ರಾಜ್ಯಗಳ ಅಭ್ಯರ್ಥಿಗಳಿಗೆ ಅವಕಾಶ ನಿರಾಕರಿಸಿರುವಂತಹ ನಿಯಮ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್್ ಹೇಳಿದೆ.
‘ಕರ್ನಾಟಕ ಮೂಲ’ದ ಎಂಬ ಕಡ್ಡಾಯ ನಿಯಮವು ಕರ್ನಾಟಕದ ಎಂಬಿಬಿಎಸ್ ಮತ್ತು ಬಿಡಿಎಸ್ ಕಾಲೇಜುಗಳಲ್ಲೇ ವ್ಯಾಸಂಗ ಮಾಡಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಸ್ನಾತಕೋತರ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಇದು ಸಂವಿಧಾನಬಾಹಿರ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ಎಫ್.ಎಂ.ಐ. ಕಲೀಫುಲ್ಲಾ ಅವರ ಪೀಠ ಹೇಳಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ವಿಶಾಲ್ ಗೋಯಲ್ ಮತ್ತು ಇತರರು ಕರ್ನಾಟಕ ಸರ್ಕಾರ ಹೊರತಂದಿರುವ ಕಿರುಹೊತ್ತಿಗೆಯ ನಿಯಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.