ಶಿಮ್ಲಾ, ನಾಗಪುರ, ಹರಿದ್ವಾರ (ಪಿಟಿಐ): ‘‘ರಾಹುಲ್ ಗಾಂಧಿ ಅವರು ದಲಿತರ ಮನೆಗೆ ‘ಮಧುಚಂದ್ರಕ್ಕಾಗಿ’ ತೆರಳುತ್ತಾರೆ’’ ಎಂದು ಹೇಳಿಕೆ ನೀಡಿದ ರಾಮ್ದೇವ್ ಅವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿ ಸೋಮವಾರ ಬಿಹಾರ, ಮಹಾರಾಷ್ಟ್ರ ಮತ್ತು ರಾಜಸ್ತಾನದಲ್ಲಿ ಎಫ್ಐಆರ್ ದಾಖಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ರಾಮ್ದೇವ್ ಕಾರ್ಯಕ್ರಮದ ಮೇಲೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಅಮೇಠಿಯಲ್ಲಿ ನಡೆಯಲಿರುವ ಯೋಗ ಶಿಬಿರದ ಮೇಲೂ ಜಿಲ್ಲಾಡಳಿತ ನಿಷೇಧ ಹೇರಿದೆ.
‘ಈ ನಿರ್ಬಂಧದ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇನೆ. ನಾನು ರಾಹುಲ್ ವಿರುದ್ಧ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿದೆ’ ಎಂದು ರಾಮ್ದೇವ್ ತಿಳಿಸಿದ್ದಾರೆ.
ಈ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ನಾನು ಕ್ಷಮೆ ಕೇಳಿದ್ದೇನೆ. ಈ ವಿಷಯವನ್ನು ಕೆದಕಿ ದಲಿತರನ್ನು ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ’ ಎಂದು ಅವರು ದೂರಿದ್ದಾರೆ.
ಬಿಹಾರದಲ್ಲಿ ಸಚಿವ, ಜೆಡಿ(ಯು) ನಾಯಕ ಶ್ಯಾಮ್ ರಜಕ್, ರಾಮ್ದೇವ್ ವಿರುದ್ಧ ದೂರು ನೀಡಿದ್ದಾರೆ.
ಶಂಕರಾಚಾರ್ಯ ಸ್ವಾಮಿ ಟೀಕೆ: ರಾಹುಲ್ ವಿರುದ್ಧದ ರಾಮ್ದೇವ್ ಹೇಳಿಕೆಯನ್ನು ಪುರಿ ಗೋವರ್ಧನ ಪೀಠದ ಶಂಕರಾಚಾರ್ಯ ಸ್ವಾಮಿ ಅಧೋಕ್ಷಾನಂದರು ಖಂಡಿಸಿದ್ದಾರೆ. ಸಂತರಿಂದ ಜನರು ಪವಿತ್ರ ಪದಗಳನ್ನು ನಿರೀಕ್ಷಿಸುತ್ತಾರೆ. ಅಶ್ಲೀಲ ಪದಗಳನ್ನಲ್ಲ ಎಂದು ಅವರು ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಅಜ್ಜಿ ಹಾಗೂ ತಂದೆಯ ಭದ್ರತೆಯಿಂದ ವಂಚಿತರಾಗಿರುವ ರಾಹುಲ್ ಗಾಂಧಿಯ ಮೇಲೆ ಈ ರೀತಿಯ ಪದಪ್ರಹಾರ ಸರಿಯಲ್ಲ ಎಂದು ಸ್ವಾಮಿ ಅಧೋಕ್ಷಾನಂದರು ಅಭಿಪ್ರಾಯಪಟ್ಟಿದ್ದಾರೆ.