ಚಂಡೀಗಡ (ಪಿಟಿಐ): ಸ್ವಯಂಘೋಷಿತ ‘ದೇವಮಾನವ’ ರಾಮ್ಪಾಲ್ ಅವರ ವಿರುದ್ಧದ 2006ರ ಕೊಲೆ ಪ್ರಕರಣದ ಜಾಮೀನನ್ನು ಗುರುವಾರ ರದ್ದುಗೊಳಿಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಈ ಪ್ರಕರಣ ಸಂಬಂಧ ರಾಮ್ಪಾಲ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪೊಲೀಸರು ರಾಮ್ಪಾಲ್ ಅವರನ್ನು ಬಂಧಿಸಿರುವ ಬೆನ್ನಲ್ಲೆ ಹೈಕೋರ್ಟ್ ಈ ಸೂಚನೆ ನೀಡಿದೆ. ಹರಿಯಾಣದ ಅಡ್ವೊಕೇಟ್ ಜನರಲ್ ಮತ್ತು ವಿಶೇಷ ಅಧಿಕಾರಿ, ರಾಮ್ಪಾಲ್ ಬಂಧನದ ವಿಷಯವನ್ನು ಹೈಕೋರ್ಟ್ಗೆ ತಿಳಿಸಿದ ಕೆಲ ಹೊತ್ತಿನಲ್ಲೆ ಈ ಆದೇಶ ನೀಡಲಾಗಿದೆ.
ನ್ಯಾಯಮೂರ್ತಿ ಎಂ.ಜಯಪಾಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು, ರಾಮ್ಪಾಲ್ ವಿರುದ್ಧ 2006ರ ಕೊಲೆ ಪ್ರಕರಣದ ಸಂಬಂಧ ಕ್ರಮ ಜರುಗಿಸುವುದು ಸ್ಪಷ್ಟವಾಗಿದೆ.
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ನೀಡಿದ್ದ ಗಡುವು ಮುಗಿದರೂ ರಾಮ್ಪಾಲ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ರಾಮ್ಪಾಲ್ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಹೈಕೋರ್ಟ್ ಹರಿಯಾಣ ಪೊಲೀಸರಿಗೆ ಸೂಚನೆ ನೀಡಿತ್ತು. ಎರಡು ವಾರಗಳ ಕಾರ್ಯಾಚರಣೆ ನಡೆಸಿದ ಪೊಲೀಸರು ಬುಧವಾರ ರಾತ್ರಿ ಸತ್ಲೋಕ್ ಆಶ್ರಮದಲ್ಲಿ ರಾಮ್ಪಾಲ್ ಅವರನ್ನು ಬಂಧಿಸಿದ್ದರು.