ದೇಶ ಸದ್ಯಕ್ಕೆ ಆಂತರಿಕವಾಗಿಯೂ ಬಾಹ್ಯವಾಗಿಯೂ ಅಸುರಕ್ಷತೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆ, ನಕ್ಸಲ್ ಹಾವಳಿ, ಧಾರ್ಮಿಕ ಅಸಹನೆ ಇತ್ಯಾದಿಗಳಿಂದಾಗಿ ದೇಶ ಆಂತರಿಕವಾಗಿ ಧಗಧಗಿಸುತ್ತಿದ್ದು, ಇದನ್ನು ಆರಿಸುವುದಕ್ಕೇ ಸೇನೆಯ ಶ್ರಮ ಹೆಚ್ಚು ವ್ಯಯವಾಗುತ್ತಿದೆ.
ಹೊರಗಿನಿಂದ ಎದುರಾಗುವ ದಾಳಿ ಎದುರಿಸಲು ಸೇನೆ ಲಭ್ಯವಾಗುತ್ತಿಲ್ಲ. ಇದು ನಮ್ಮ ಎದುರಾಳಿಗಳಾದ ಪಾಕಿಸ್ತಾನ–ಚೀನಾಗಳಿಗೆ ಆಮಂತ್ರಣ ನೀಡಿದಂತೆ. ಎದುರಾಳಿಗಳ ಹಸ್ತಕ್ಷೇಪ, ಗಡಿ ಕಲಹ, ಚಕಮಕಿಗಳು ಹೆಚ್ಚುತ್ತಲೇ ಇವೆ. ಪ್ರತಿಸಲ ಇಂಥ ಮುಖಾಮುಖಿಯಲ್ಲಿ ನಮ್ಮ ಅಶಕ್ತತೆ, ಅನಿಶ್ಚಿತತೆ ಎದ್ದು ಕಾಣುತ್ತಿದೆ. ನಮ್ಮ ಆತ್ಮವಿಶ್ವಾಸ, ಸ್ಥೈರ್ಯ ಉಡುಗತೊಡಗಿವೆ.
ಆಂತರಿಕ ಸುರಕ್ಷತೆಯನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಕಾಪಾಡಿಕೊಳ್ಳುವ ದೃಢ ಪ್ರಯತ್ನಗಳು ಆಗುತ್ತಿಲ್ಲ. ದೇಶದ ಒಳಗಿನ ಹುಣ್ಣುಗಳನ್ನು ಸೇನೆಯ ಉಡಿಯಲ್ಲಿಯೇ ಹಾಕುತ್ತಿರುವುದು ಏಕೆ? ಜನತಾ ಪ್ರತಿನಿಧಿಗಳು ಈ ಸಮಸ್ಯೆಗಳನ್ನು ರಾಜಕೀಯವಾಗಿ, ಪ್ರಜಾತಾಂತ್ರಿಕವಾಗಿ ಬಿಡಿಸಲು ಏಕೆ ಆಗುತ್ತಿಲ್ಲ?
ಚಿಕ್ಕಪುಟ್ಟ ಕಚ್ಚಾಟ, ಗಡಿಗಲಭೆ, ಚಕಮಕಿಯಂಥ ಕೃತ್ಯಗಳನ್ನು ನಡೆಸಿ, ಗಡಿ ಪ್ರದೇಶದಲ್ಲಿ ಅಭದ್ರ ಸ್ಥಿತಿಯನ್ನು ಸೃಷ್ಟಿಸಿ, ನಮ್ಮ ದೇಶವನ್ನು ಕೆಣಕುವ ಕಾರ್ಯಾಚರಣೆಯೇ ಈಗಿನ ಸಮರ ಶೈಲಿ-ಯಾದಂತಿದೆ. ಇಂತಹ ಶತ್ರು ಸಂಕಲ್ಪ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಎದುರಿಸುವ ಯುದ್ಧ ತಂತ್ರ ನಮ್ಮಲ್ಲಿ ಏಕಿಲ್ಲ? ನಾವು ದೇಶದ ಭದ್ರತೆ ವಿಷಯದಲ್ಲಿ ಏಕೆ ಹಿಂದುಳಿದಿದ್ದೇವೆ?
ನಮ್ಮ ಗಡಿಯಲ್ಲಿ ಯುದ್ಧ ಸಿದ್ಧತೆ, ರಸ್ತೆ, ರೈಲು, ವಿಮಾನತಾಣ, ಗುಡಾಣ, ವರ್ಕ್ಶಾಪ್, ಸಮರ ಸಲಕರಣೆಗಳ ಸಂಗ್ರಹ ಇತ್ಯಾದಿ ಬುನಾದಿ ವ್ಯವಸ್ಥೆಗಳಿಲ್ಲದೇ ನಮ್ಮ ಸೈನಿಕರು ಹೋರಾಡುವುದೆಂತು? ಆಧುನೀಕರಣ ಮತ್ತು ಶಸ್ತ್ರಾಸ್ತ್ರ ಸಂಖ್ಯೆ ಯುದ್ಧ ಗೆಲ್ಲಲಷ್ಟೇ ಅಲ್ಲ, ವಿರೋಧಿಯು ಯುದ್ಧಕ್ಕಿಳಿಯದಂತೆ ತಡೆಯಲು ಕೂಡ ಅವಶ್ಯಕ. ಸೈನಿಕರನ್ನು ಶೂರರು ಎಂದು ಹುರಿದುಂಬಿಸುತ್ತ, ಸತ್ತ ಸೈನಿಕರಿಗೆ ಮಾಲಾರ್ಪಣೆ ಮಾಡಿ, ಕಣ್ಣೀರು ಸುರಿಸುವುದೇ ನಮ್ಮ ಸಮರ ಶಕ್ತಿಯಾಗಬಲ್ಲದೇ? ಜೀವಂತ ಸೈನಿಕರು, ಅವರ ಸಮರ ಸಿದ್ಧತೆ, ಶಸ್ತ್ರಾಸ್ತ್ರಗಳ ಬಗ್ಗೆ ಮಾತಾಡುವುದಿಲ್ಲ ಏಕೆ?
ಈ ಎಲ್ಲ ವಿಷಯಗಳು ಚುನಾವಣೆಯಲ್ಲಿ ಕೇಳಿಬರುವುದೇ ಇಲ್ಲವಲ್ಲ? ದೇಶವನ್ನು ಕಾಯುವ ಸೇನೆಯ ಬಗ್ಗೆ ಇಷ್ಟು ಅನಾದರವೇ? ದೇಶದ ಸುರಕ್ಷತೆಯ ವಿಷಯದ ಬಗ್ಗೆ ಯಾವೊಂದು ಪಕ್ಷ, ಅಭ್ಯರ್ಥಿ ಚಕಾರವೆತ್ತುತ್ತಿಲ್ಲ. ಇದೆಂತಹ ದೇಶಪ್ರೇಮ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.