ಟಿಎಂಸಿ ಪುನರ್ರಚನೆ
ತಿರುಚನಾಪಳ್ಳಿ (ಪಿಟಿಐ): ಕಾಂಗ್ರೆಸ್ ಸಖ್ಯ ತೊರೆದ ಕೆಲವು ವಾರಗಳ ನಂತರ ಜಿ.ಕೆ. ಮೂಪನಾರ್ ಸ್ಥಾಪಿಸಿದ ತಮಿಳು ಮನಿಲಾ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಅವರ ಪುತ್ರ ಜಿ.ಕೆ. ವಾಸನ್ ಶುಕ್ರವಾರ ಮರಳಿ ಸ್ಥಾಪಿಸಿದರು. ‘ಬಲಿಷ್ಠ ಭಾರತ ಮತ್ತು ತಮಿಳುನಾಡಿನ ಅಭಿವೃದ್ಧಿ ನಮ್ಮ ಮುಖ್ಯ ಗುರಿಯಾಗಿದೆ’ ಇಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ವಾಸನ್ ಹೇಳಿದ್ದಾರೆ.
ಹೈದರಾಬಾದ್ ವಿಶ್ವ ನಗರ
ಹೈದಾರಾಬಾದ್ (ಪಿಟಿಐ): 2015ರಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ವಿಶ್ವದ 2ನೇ ಅತ್ಯುತ್ತಮ ನಗರ ಹೈದರಾಬಾದ್ ಎಂದು ಅಂತರರಾಷ್ಟ್ರೀಯ ಪ್ರವಾಸ ಮ್ಯಾಗಜಿನ್ ತಿಳಿಸಿದೆ.
ನ್ಯಾಷನಲ್ ಜಿಯೋಗ್ರಫಿಯ ‘ಟ್ರಾವೆಲರ್’ ಮ್ಯಾಗಜಿನ್ ವಾರ್ಷಿಕ ಮಾರ್ಗದರ್ಶನವನ್ನು ಪ್ರಕಟಿಸಿದ್ದು, ಇದರಲ್ಲಿ ನೋಡಲೇಬೇಕಾದ 20 ನಗರಗಳನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ನಗರ ಮೊದಲ ಸ್ಥಾನ ಪಡೆದಿದೆ.
ಈ ಪಟ್ಟಿಯಲ್ಲಿ ಸ್ವಿಡ್ಜರ್ಲೆಂಡ್ನ ಝೆರ್ಮತ್, ವಾಷಿಂಗ್ಟನ್ನ ನ್ಯಾಷನಲ್ ಮಾಲ್, ಕೊರ್ಸಿಕ, ಪೆರುವಿನ ಚೊಕ್ವೆಕ್ಯುರಾವ್, ಸಾರ್ಕ್, ಜಪಾನ್ನ ಕೊಯಸನ್, ಒಕ್ಲಹೊಮ ಹಾಗೂ ರೊಮೇನಿಯದ ಮರಮುರೆಸ್ ನಗರಗಳು ಸ್ಥಾನ ಪಡೆದಿದೆ.
ನರ್ಸರಿ ಶಾಲೆ: ಮಾರ್ಗಸೂಚಿ ರದ್ದು
ನವದೆಹಲಿ (ಪಿಟಿಐ/ಐಎಎನ್ಎಸ್): ನರ್ಸರಿ ಶಾಲೆ ಪ್ರವೇಶಕ್ಕೆ ಸಂಬಂಧಿಸಿದಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಳೆದ ವರ್ಷ ಹೊರಡಿಸಿದ ಮಾರ್ಗಸೂಚಿಯನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
‘ಈ ಮಾರ್ಗಸೂಚಿ ಶಾಲೆಗಳ ಆಡಳಿತ ಮಂಡಳಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಕೋರ್ಟ್ ಹೇಳಿದೆ.
ರೈಲ್ವೆ ಆರ್ಥಿಕ ಅಶಿಸ್ತು: ತರಾಟೆ
ನವದೆಹಲಿ (ಪಿಟಿಐ): ಆರ್ಥಿಕ ಶಿಸ್ತು ಉಲ್ಲಂಘಿಸಿದ ರೈಲ್ವೆ ಇಲಾಖೆಯನ್ನು ಮಹಾಲೇಖಪಾಲರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪಾರದರ್ಶಕ ಹಣಕಾಸು ವಹಿವಾಟಿಗೆ ತಾನೇ ರೂಪಿಸಿರುವ ಆರ್ಥಿಕ ನಿಯಮಾವಳಿಗಳನ್ನು ರೈಲ್ವೆ ಇಲಾಖೆ ಗಾಳಿಗೆ ತೂರಿರುವುದು ಆರ್ಥಿಕ ಅಶಿಸ್ತಿಗೆ ಕಾರಣ ಎಂದು ಸಿಎಜಿ ವರದಿ ಆರೋಪಿಸಿದೆ.
ಸಂಸತ್ನಲ್ಲಿ ಶುಕ್ರವಾರ ಮಂಡಿಸಲಾದ ಸಿಎಜಿ ವರದಿ ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿಯ ವೈಫಲ್ಯ ಮತ್ತು ಅದಕ್ಕೆ ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಜತೆಗೆ ಸೂಕ್ತ ಲೆಕ್ಕಪತ್ರಗಳನ್ನು ಕಾಪಾಡದ ರೈಲ್ವೆ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಲಿಗಢ: ಬಿಜೆಪಿ ರ್್ಯಾಲಿಗೆ ವಿರೊಧ
ಅಲೀಗಡ/ನವದೆಹಲಿ (ಪಿಟಿಐ): ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಅವರ ಜನ್ಮದಿನಾಚರಣೆಯನ್ನು ನಡೆಸುವ ಬಿಜೆಪಿ ನಿರ್ಧಾರವು ಭಾರಿ ವಿವಾದ ಹುಟ್ಟುಹಾಕಿದೆ.
ಬಿಜೆಪಿಯ ಕ್ರಮದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಕೋಮು ಗಲಭೆ ಆಗುವ ಸಾಧ್ಯತೆ ಇದೆ ಎಂದು ಕುಲಪತಿ ಜಮಿರ್ ಉದ್ದಿನ್ ಷಾ ಎಚ್ಚರಿಸಿದ್ದಾರೆ. ವಿವಿಧ ಪಕ್ಷಗಳು ಮತ್ತು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ಕುಷ್ಠರೋಗ: ‘ಸುಪ್ರೀಂ’ ಛೀಮಾರಿ
ನವದೆಹಲಿ (ಪಿಟಿಐ): ಕುಷ್ಠರೋಗ ನಿರ್ಮೂಲನೆಗೆ ನಿರುತ್ಸಾಹ ತೋರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಹುಲ್ ಗಾಂಧಿ ವಿರುದ್ಧ ಟೀಕೆ
ನವದೆಹಲಿ (ಪಿಟಿಐ): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕುರಿತು ರಸಗೊಬ್ಬರ ಸಚಿವ ಅನಂತ ಕುಮಾರ್ ಶುಕ್ರವಾರ ರಾಜ್ಯಸಭೆಯಲ್ಲಿ ಮಾಡಿದ ಟೀಕೆ ಕೋಲಾಹಲಕ್ಕೆ ಕಾರಣವಾಯಿತು.
‘ಸರ್ಕಾರ ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಿಸಿದೆ ಎಂದು ರಾಹುಲ್ ಗಾಂಧಿ ಹರಿಯಾಣ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಅಪಪ್ರಚಾರ ಮಾಡಿದ್ದಾರೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಅಗತ್ಯ ಔಷಧಗಳ ಬೆಲೆ ಹೆಚ್ಚಾಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.