ಹಾವೇರಿ: ಇಲ್ಲಿನ ದಾನೇಶ್ವರಿ ನಗರದ ಮುರುಘರಾಜೇಂದ್ರ ಲಿಂಗಾಯತ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹಾಗೂ ಸಮಿತಿ ಸದಸ್ಯರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ರಸ್ತೆಯಲ್ಲಿರುವ ರುದ್ರಭೂಮಿಯು ಮಳೆ, ಕೊಳಚೆ ನೀರು, ಕಳೆಯ ಕಾರಣ ಹದಗೆಟ್ಟಿದ್ದು, ಶವ ಸಂಸ್ಕಾರಕ್ಕೆ ಕಷ್ಟಗಳು ಎದುರಾಗುತ್ತಿತ್ತು. ಈ ನಿಟ್ಟಿನಲ್ಲಿ ರುದ್ರಭೂಮಿಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲು ಸ್ವಾಮೀಜಿ ನೇತೃತ್ವದಲ್ಲಿ ಸಮಿತಿ ಮುಂದಾಗಿದೆ.
‘ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹಾವೇರಿಯ ಹೊಸಮಠದಲ್ಲಿದ್ದ ಸಂದರ್ಭದಲ್ಲಿ ಸಾಮಾಜಿಕ ಸೇವೆಯಾಗಿ ದಾನೇಶ್ವರಿ ನಗರದ 5 ಎಕರೆ 28 ಗುಂಟೆ ಜಾಗವನ್ನು ಲಿಂಗಾಯತ ರುದ್ರಭೂಮಿಗೆ ಮೀಸಲು ಇರಿಸಿದ್ದರು. ಆದರೆ, ಪ್ರಸ್ತುತ ನಗರದ ಬೆಳವಣಿಗೆ, ನೀರಿನ ಹರಿವು ಮತ್ತಿತರ ಕಾರಣ ರುದ್ರಭೂಮಿಯ ನನೆಗುದಿಗೆ ಬಿದ್ದಿದೆ. ಸಮಸ್ಯೆಯಲ್ಲಿದೆ. ಇದನ್ನು ಅಭಿವೃದ್ಧಿ ಪಡಿಸಬೇಕು ಎಂಬ ಬೇಡಿಕೆ ಸಮಾಜದಿಂದ ಕೇಳಿಬಂದಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಈ ನಿಟ್ಟಿನಲ್ಲಿ ರುದ್ರಭೂಮಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಪರಿಶೀಲನೆ ನಡೆಸಲಾಗಿದೆ. ಮುಂದೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
‘ರುದ್ರಭೂಮಿ ಅಭಿವೃದ್ಧಿಯು ಸಮಾಜಕ್ಕೆ ಸಹಕಾರಿಯಾಗಲಿದೆ. ಇದು ಸಾಮಾಜಿಕ ಕಾರ್ಯವಾಗಿದ್ದು, ಸಮಾಜದ ನೆರವಿನ ಮೂಲಕವೇ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರುದ್ರಭೂಮಿ ಅಭಿವೃದ್ಧಿಗೆ ಮಾದರಿ ನಕ್ಷೆ ತಯಾರಿಸಲಾಗುವುದು ಎಂದು ಅವರು ಹೇಳಿದರು.
ನೀರಿನ ವ್ಯವಸ್ಥೆ, ಶೌಚಾಲಯ, ಉದ್ಯಾನ, ಗಿಡ ಮರಗಳು, ನೆರಳಿನ ವ್ಯವಸ್ಥೆ, ವಾಹನ ಸಾಗುವ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಚಿಂತನೆ ಇದೆ. ಸಮಿತಿಯು ಸಮಗ್ರವಾಗಿ ಯೋಜನೆ ರೂಪಿಸಲಿದೆ. ಬಳಿಕ ಜನಪ್ರತಿನಿಧಿಗಳು, ಮುಖಂಡರ ನೆರವಿನ ಮೂಲಕ ಅಭಿವೃದ್ಧಿ ಪಡಿಸಲಾಗುವುದು’ ಎಂದು ಅವರು ತಿಳಿಸಿದರು.
ರುದ್ರಭೂಮಿ ಅಭಿವೃದ್ಧಿಗೆ ಅಗತ್ಯ ನೆರವನ್ನು ಯಾರು ಬೇಕಾದರೂ ನೀಡಬಹುದು. ಜನ ಪ್ರತಿನಿಧಿಗಳು, ಮುಖಂಡರು ನೆರವಿನ ಹಸ್ತ ಚಾಚಬೇಕು ಎಂದು ಅವರು ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲಗಣ್ಣನವರ, ‘ಈ ರುದ್ರಭೂಮಿ ಅಭಿವೃದ್ಧಿಗೆ ನಗರಸಭೆ, ಜನಪ್ರತಿನಿಧಿಗಳು, ಸರ್ಕಾರದಿಂದ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ನಾಗೇಂದ್ರ ಕಟಕೋಳ, ದಯಾನಂದ ಯಡ್ರಾಮಿ, ಇಂದೂಧರ ಯರ್ರೇಸೀಮೆ, ರುದ್ರಯ್ಯ ಹಿರೇಮಠ, ಮಹಾಂತೇಶ ಜಂಗಲಿ, ಪರಮೇಶ್ವರಪ್ಪ ಮೇಗಳಮನಿ, ಶಿವಬಸವ ಹಲಗಣ್ಣನವರ ಮತ್ತಿತರ ಪ್ರಮುಖರು ಪರಿಶೀಲನೆ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.