ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಓಡಾಡುವ ಮಹಿಳೆಯರಿಂದ ಚಿನ್ನದ ಸರ ದೋಚುತ್ತಿದ್ದ ಮೂವರು ಕುಖ್ಯಾತ ಸರಗಳ್ಳರನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
‘ಮೈಸೂರಿನ ಗೌಸಿಯಾನಗರದ ಸನಾವುಲ್ಲಾ (27), ನಗರದ ಗಂಗೊಂಡ ನಹಳ್ಳಿ ನಿವಾಸಿ ಸಾದಿಕ್ (26) ಹಾಗೂ ಕೇರಳದ ಸುದೇಶ್ ಕುಮಾರ್ (28) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₨ 20 ಲಕ್ಷ ಮೌಲ್ಯದ 765 ಗ್ರಾಂ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಇಬ್ರಾಹಿಂ ಅಲಿಯಾಸ್ ಕಾಲು ತಲೆಮರೆಸಿಕೊಂಡಿದ್ದಾನೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ತಿಳಿಸಿದರು.
‘ಆರೋಪಿಗಳು ಬೆಳಗಿನ ಜಾವ ಹಾಗೂ ಮಧ್ಯಾ ಹ್ನದ ವೇಳೆ ಬೈಕ್ಗಳಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದರು. ನಿರ್ಜನ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಇವರು, ಒಂಟಿ ಮಹಿಳೆಯರನ್ನು ಗುರುತಿಸುತ್ತಿದ್ದರು. ನಂತರ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿ, ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದಾಗಿ ಬಂಧಿತರು ಹೇಳಿಕೆ ನೀಡಿದ್ದಾರೆ’ ಎಂದರು.
‘ಸನಾವುಲ್ಲಾ ಮತ್ತು ಇತರ ಆರೋಪಿಗಳು ಚಿನ್ನದ ಸರಗಳನ್ನು ಕಳವು ಮಾಡಿ ಸುದೇಶ್ನಿಗೆ ಕೊಡುತ್ತಿದ್ದರು. ಆತ, ಪರಿಚಿತರ ಮುಖಾಂತರ ಗಿರವಿ ಅಂಗಡಿಗಳಲ್ಲಿ ಅಡಮಾನವಿಡಿಸಿ ಹಣ ಪಡೆಯುತ್ತಿದ್ದ. ಇವರ ಬಂಧನದಿಂದ ನಗರದಲ್ಲಿ ನಡೆದಿದ್ದ 30 ಸರಗಳವು ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ಹರಿಶೇಖರನ್ ಹೇಳಿದರು.
‘ಬೆಳಗಿನ ಜಾವ ಮತ್ತು ಮಧ್ಯಾಹ್ನದ ಸಮಯದಲ್ಲಿ ಸರಗಳವು ಪ್ರಕರಣಗಳು ಹೆಚ್ಚಾಗಿದ್ದರಿಂದ ಕಲಾಸಿಪಾಳ್ಯ ಠಾಣೆ ಇನ್ಸ್ಪೆಕ್ಟರ್ ಜಿ.ಎಸ್.ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸಿಬ್ಬಂದಿ, ಈ ಎರಡು ಅವಧಿಯಲ್ಲೇ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಕೃತ್ಯ ಎಸಗಲು ಬಂದಿದ್ದ ಆರೋಪಿಗಳು ಸಿಕ್ಕಿ ಬಿದ್ದರು. ಪ್ರಮುಖ ಆರೋಪಿ ಸನಾವುಲ್ಲಾನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಬಸ್ ಕಳ್ಳನ ಬಂಧನ: ಖಾಸಗಿ ಬಸ್ ಕಳವು ಮಾಡಿದ್ದ ನಾರಾಯಣರೆಡ್ಡಿ (38) ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಗುಂಡ್ಲಪಲ್ಲಿ ಗ್ರಾಮದ ನಾರಾಯಣರೆಡ್ಡಿ, ಉಪ್ಪಾರಪೇಟೆಯ ಅಶ್ವಿನಿ ಟ್ರಾವೆಲ್ಸ್ನಲ್ಲಿ ಬಸ್ ಚಾಲಕನಾಗಿದ್ದ. ಇತ್ತೀಚೆಗೆ ಆತ ಕೆಲಸ ಬಿಟ್ಟಿದ್ದ. ನಕಲಿ ಕೀ ಬಳಸಿ ಬಸ್ ಕದ್ದೊಯ್ದ ಆರೋಪಿ, ಹುಟ್ಟೂರಾದ ಗುಂಡ್ಲುಪಲ್ಲಿಯಲ್ಲಿ ಮಾರಾಟ ಮಾಡುವ ಯತ್ನಿಸಿದ್ದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.