ರೈಲ್ವೆ ಸಚಿವರು ಬೆಂಗಳೂರಿಗೆ ಮಾತ್ರ ಮೀಸಲು ಎಂದು ಬೆಂಗಳೂರಿನ ಅತಿರಥ ಮಹಾರಥರು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಜನ ಏನು ಪಾಪ ಮಾಡಿದ್ದಾರೆ? ಹುಬ್ಬಳ್ಳಿ – ಅಂಕೋಲಾ ಯೋಜನೆ ನನೆಗುದಿಗೆ ಬಿದ್ದಿರುವುದೇಕೆ? ಕಾರವಾರ ನೈಸರ್ಗಿಕ ಬಂದರು, ಅದರ ಅಭಿವೃದ್ಧಿಗೆ ಹೆಚ್ಚಿನ ಹಣ ಬೇಕಾಗಿರಲಿಲ್ಲ.
ಹಿಂದೆ ಕೊಂಕಣ ರೈಲ್ವೆ ಪೂರ್ಣಗೊಂಡ ಬಳಿಕ ಹುಬ್ಬಳ್ಳಿ– ಅಂಕೋಲಾ ಯೋಜನೆ ಅಟಲ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿ ಆಗಿದ್ದಾಗ ಪ್ರಾರಂಭವಾಯಿತು. ಮುಂದೆ ಯು.ಪಿ.ಎ. ಅಧಿಕಾರಕ್ಕೆ ಬಂತು. ಹುಬ್ಬಳ್ಳಿ– ಅಂಕೋಲಾ ಯೋಜನೆ ನನೆಗುದಿಗೆ ಬಿತ್ತು. ಕಲಘಟಗಿ ಶಾಸಕ ಸೇರಿದಂತೆ ಉತ್ತರ ಕನ್ನಡ ಭಾಗದ ಎಲ್ಲ ಶಾಸಕರು, ಸಂಸದರು ಇತ್ತ ಕುರುಡರಾಗಿಯೇ ಉಳಿದರು.
ಉತ್ತರ ಕನ್ನಡದ ಅಭಿವೃದ್ಧಿ ಯಾರಿಗೂ ಬೇಕಾಗಿಲ್ಲ? ಸಂಸದರೆಲ್ಲರೂ ಸೇರಿ ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆ ಕಲಘಟಗಿಯಿಂದ ಮುಂದೆ ನಿಂತು ಹೋಗಿರುವುದನ್ನು ನಮ್ಮವರೇ ಆದ ರೈಲ್ವೇ ಸಚಿವ ಸದಾನಂದ ಗೌಡರಿಗೆ ಮನವರಿಕೆ ಮಾಡಿಕೊಡಲಿ. ಧಾರವಾಡದ ಸಂಸದರು ಸುಮ್ಮನಿರುವುದೇಕೆ? ಎಲ್ಲರೂ ಸೇರಿ ಒಕ್ಕೊರಲಿನಿಂದ ಒತ್ತಡ ತಂದರೆ ಈ ಯೋಜನೆ ಖಂಡಿತ ಜಾರಿಗೆ ಬರುತ್ತದೆ!