ಬೆಂಗಳೂರು: ಅನುಭವಿ ಚಾಲಕ ಕೆ.ಪಿ. ಅರವಿಂದ್ ಮಹಾರಾಷ್ಟ್ರದ ನಿಷಾಕ್ನಲ್ಲಿ ನಡೆದ ಎಫ್ಎಂಎಸ್ಸಿಐ ರಾಷ್ಟ್ರೀಯ ಮೋಟಾರು ಬೈಕ್ ರ್ಯಾಲಿ ಚಾಂಪಿಯನ್ ಷಿಪ್ನ ಮೊದಲ ಹಂತದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ವಿ.ಎಸ್. ನರೇಶ್ ಹಾಗೂ ಅಬ್ದುಲ್ ವಾಹಿದ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡರು.
170 ಕಿ.ಮೀ. ದೂರದ ಸ್ಪರ್ಧೆಯಲ್ಲಿ 48 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಹತ್ತು ಜನರಿಗೆ ಸ್ಪರ್ಧೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಮೋಟಾರು ಸೈಕಲ್ ಗುಂಪು –ಎ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಅರವಿಂದ್ 43 ನಿಮಿಷ 36 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದೇ ವಿಭಾಗದಲ್ಲಿ ವಾಹಿದ್ 45 ನಿಮಿಷ 56 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
ಆರಂಭದಲ್ಲಿಯೇ ಅಲ್ಪ ವೇಗದೊಂದಿಗೆ ಸ್ಪರ್ಧೆ ಆರಂಭಿಸಿದ ಅರವಿಂದ್ ನಂತರ ವೇಗ ಹೆಚ್ಚಿಸಿಕೊಂಡರು. ಈ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಂಡು ಗೆಲುವು ಪಡೆಯುವಲ್ಲಿ ಯಶಸ್ವಿಯಾದರು.
ಕ್ಲಾಸ್ ನಾಲ್ಕರ 166ರಿಂದ 260 ಸಿಸಿ ಒಳಗಿನ ಪೈಪೋಟಿಯಲ್ಲಿ ನರೇಶ್ 45 ನಿಮಿಷ 56 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ನರೇಶ್ ಮತ್ತು ವಾಹಿದ್ಗೆ ಅಲ್ಪ ಪೈಪೋಟಿ ಎದುರಾಯಿತು. ಎಫ್ಎಂಎಸ್ಸಿಐ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ನ ಎರಡನೇ ಸುತ್ತು ಜೂನ್ 11ರಿಂದ ನಾಲ್ಕು ದಿನ ಜರುಗಲಿದೆ.