ಕಲಬುರ್ಗಿ: ಕೇರಳ ಮೂಲದ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ರ್ಯಾಗಿಂಗ್ ಆರೋಪಕ್ಕೆ ಸಂಬಂಧಿದಂತೆ ಬಂಧನಕ್ಕೆ ಒಳಗಾಗಿರುವ ಮೂವರು ವಿದ್ಯಾರ್ಥಿನಿಯರ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶನಿವಾರ (ಜು.2)ಕ್ಕೆ ಮುಂದೂಡಿತು.
ಬಂಧಿತರ ಪರ ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲರು ಮತ್ತು ಸರ್ಕಾರಿ ಅಭಿಯೋಜಕರ ವಾದ ಆಲಿಸಿದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಎಂ.ಪ್ರೇಮಾವತಿ ಅವರು ವಿಚಾರಣೆಯನ್ನು ಮುಂದೂಡಿದರು.
ಜೂ.30ರಂದು ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೀಗಾಗಿ ಬಂಧಿತರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಡಿವೈಎಸ್ಪಿ ವಾಪಸು: ‘ರ್ಯಾಗಿಂಗ್ಗೆ ಒಳಗಾಗಿರುವ ಇಲ್ಲಿನ ಅಲ್ ಖಮರ್ ಕಾಲೇಜಿನ ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಅಶ್ವತಿ ಮತ್ತು ಆಕೆಯ ತಾಯಿಯ ಹೇಳಿಕೆ ಪಡೆಯಲು ಕೇರಳಕ್ಕೆ ತೆರಳಿದ್ದ ಪ್ರಕರಣದ ವಿಚಾರಣಾಧಿಕಾರಿ, ಡಿವೈಎಸ್ಪಿ ಜಾಹ್ನವಿ ಎ. ಶುಕ್ರವಾರ ಕಲಬುರ್ಗಿಗೆ ವಾಪಸು ಬಂದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.