ಲಕ್ಷ್ಮೇಶ್ವರ: ‘ಶಿಗ್ಲಿಯಲ್ಲಿ ನನ್ನ ಜೀವಕ್ಕೆ ಅಪಾಯವಿದ್ದು, ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ನನಗೆ ಜೀವಬೆದರಿಕೆ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರು-ಗಿಸಬೇಕು’ ಎಂದು ಆಗ್ರಹಿಸಿ ಸಮೀಪದ ಶಿಗ್ಲಿ ಗ್ರಾಮದ ಬಸವರಾಜ ಬೆಲಗಜ್ಜರಿ (ಶಿಗ್ಲಿ ಬಸ್ಯಾ) ಇಲ್ಲಿಯ ಪುರಸಭೆ ಎದುರಿನ ಕಟ್ಟೆಯ ಮೇಲೆ ಕುಟುಂಬದ ಸದಸ್ಯರೊಂದಿಗೆ ಗುರುವಾರ ಇಡೀ ದಿನ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಮರ ಅಥವಾ ಮೊಬೈಲ್ ಟವರ್ ಏರಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ಇಡೀ ರಾಜ್ಯದಲ್ಲಿಯೇ ಶಿಗ್ಲಿ ಬಸ್ಯಾ ಹೆಸರುವಾಸಿಯಾಗಿದ್ದಾರೆ. ಜೈಲಿನಲ್ಲಿದ್ದಾಗಲೂ ಮರ ಏರಿ ಪ್ರತಿಭಟಿಸಿದ ಉದಾಹರಣೆಗಳಿವೆ.
ಹೆಂಡತಿ ಹಾಗೂ ಐವರು ಮಕ್ಕಳೊಂದಿಗೆ ಆತ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಸಬ್ಇನ್ಸ್ಪೆಕ್ಟರ್ ಡಿ.ಬಿ. ರವಿಚಂದ್ರ ಭೇಟಿ ಮಾಡಿ, ಸಮಸ್ಯೆಗಳನ್ನು ಆಲಿಸಿದರು.
‘ನಾನು ಕಳವು ಮಾಡಿದ್ದ ಬಂಗಾರ, ಬೆಳ್ಳಿ ವಸ್ತುಗಳನ್ನು ಊರಿನ ಕೆಲವರು ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾನು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇನೆ. ನನಗೆ ಸಾಲ ಕೊಟ್ಟವರು ಮೊದಲು ನನ್ನ ಕಡೆಯಿಂದ ಬಂಗಾರ ತೆಗೆದುಕೊಂಡವರೇ ಆಗಿದ್ದು ಸಾಲದ ಹಣವನ್ನು ಪಾವತಿಸುವಂತೆ ಈಗ ಬೆದರಿಕೆ ಹಾಕುತ್ತಿದ್ದಾರೆ. ಸಾಲ ತೀರಿಸಲು ಮತ್ತೆ ಕಳ್ಳತನ ಮಾಡುವಂತೆ ಪ್ರಚೋದಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ಕೊಡಲು ಹೋದರೆ ಅವರು ಸಂಜೆವರೆಗೂ ಕಚೇರಿಗೆ ಬರಲಿಲ್ಲ. ಹೀಗಾಗಿ ಅವರು ಕೇಸು ತೆಗೆದುಕೊಳ್ಳಲಿಲ್ಲ. ನೀವಾದರೂ ಕೇಸು ತೆಗೆದುಕೊಳ್ಳಿ. ನನಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮ ಜರುಗಿಸಿ’ ಎಂದು ಮನವಿ ಮಾಡಿದ್ದಾರೆ.
ಠಾಣೆಗೆ ಬಂದು ದೂರು ನೀಡಿದರೆ ವಿಚಾರಣೆ ನಡೆಸುವ ಭರವಸೆಯನ್ನು ರವಿಚಂದ್ರ ನೀಡಿದರು. ಅದಕ್ಕೆ ಒಪ್ಪಿದ ಶಿಗ್ಲಿ ಬಸ್ಯಾ, ಅವರ ಜೊತೆ ಪೋಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದರಿಂದ ಶಿಗ್ಲಿ ಬಸ್ಯಾ ಶುಕ್ರವಾರ ಮುಂಜಾನೆ ಮರಳಿ ಶಿಗ್ಲಿಗೆ ಹೋಗಿದ್ದಾರೆ.
ಕಳುವಿನ ಹಲವಾರು ಪ್ರಕರಣಗಳಲ್ಲಿ ಸ್ವತಃ ಶಿಗ್ಲಿ ಬಸ್ಯಾ ವಾದಿಸಿದ್ದು, ಸಾಕ್ಷ್ಯಗಳಿಲ್ಲದ ಕಾರಣ ಖುಲಾಸೆಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.