ಲಖ್ವಿ ಶುಕ್ರವಾರ ಬೆಳಿಗ್ಗೆ ರಾವಲ್ಪಿಂಡಿಯ ಅಡಿಯಾಲ ಜೈಲಿನಿಂದ ಬಿಡುಗಡೆ ಆಗಬೇಕಿತ್ತು. ಆದರೆ, ಸರ್ಕಾರ ಇನ್ನೂ ಮೂರು ತಿಂಗಳ ಕಾಲ ಅವರನ್ನು ಸೆರೆಯಲ್ಲಿಯೇ ಇರಿಸಲು ನಿರ್ಧರಿಸಿದೆ. ಹೀಗಾಗಿ ‘ಎಂಪಿಒ’ ಪ್ರತಿಯನ್ನು ಜೈಲು ಅಧಿಕಾರಿಗೆ ನೀಡಲಾಗಿದೆ. ಇದರ ಜತೆಗೆ, ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ, ಪಾಕಿಸ್ತಾನ ಸರ್ಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಈ ವಿಚಾರವನ್ನು ಭಾರತ ಸರ್ಕಾರದ ಗಮನಕ್ಕೂ ತರಲಾಗಿದೆ ಎಂದು ಸರ್ಕಾರಿ ಅಭಿಯೋಜಕ ಮಹಮದ್ ಅಜರ್ ಚೌಧರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸಾಕ್ಷ್ಯಗಳ ಕೊರತೆ ಇದೆ ಎಂದು ಹೇಳಿ ಭಯೋತ್ಪಾದನಾ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಲಿಖ್ವಿಗೆ ಜಾಮೀನು ನೀಡಿದ್ದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕೂಡಲೇ ಈ ಆದೇಶವನ್ನು ರದ್ದುಮಾಡಬೇಕೆಂದು ಒತ್ತಾಯಿಸಿತ್ತು.
‘ಮೇಲ್ಮನವಿ ಸಲ್ಲಿಸಲು ಬೇಕಿರುವ ಕಾನೂನಿನ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸೋಮವಾರ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಚೌಧರಿ ಹೇಳಿದ್ದಾರೆ.
‘ಮುಂಬೈ ಮೇಲಿನ ದಾಳಿಯಲ್ಲಿ ಮುಗ್ಧ ಜನರು ಜೀವ ಕಳೆದುಕೊಂಡಿದ್ದರು. ಈ ಆದೇಶವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಲಖ್ವಿಯನ್ನು ಅಂತರರಾಷ್ಟ್ರೀಯ ಉಗ್ರ ಎಂದು ಘೋಷಿಸಿದೆ. ಇಂಥ ವ್ಯಕ್ತಿಗೆ ಜಾಮೀನು ಸಿಕ್ಕಿರುವುದು ದುರದೃಷ್ಟಕರ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತೀಕ್ಷ್ಣವಾಗಿ ಖಂಡಿಸಿದ್ದರು.