ಇಸ್ಲಾಮಾಬಾದ್/ನವದೆಹಲಿ (ಪಿಟಿಐ): ಮುಂಬೈನಲ್ಲಿ ೨೦೦೮ ರಲ್ಲಿ ನಡೆದ ಉಗ್ರರ ದಾಳಿ ಪ್ರಕರಣದ ಆರೋಪಿ, ಲಷ್ಕರ್ –ಎ –ತಯಬಾ (ಎಲ್ಇಟಿ) ಕಾರ್ಯಾಚರಣೆ ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಭಯೋತ್ಪಾದನಾ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ಈ ಆದೇಶಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಈ ಆದೇಶವನ್ನು ರದ್ದುಮಾಡಬೇಕು ಎಂದೂ ಒತ್ತಾಯಿಸಿದೆ.
‘ಮುಂಬೈ ಮೇಲಿನ ದಾಳಿಯಲ್ಲಿ ಮುಗ್ಧ ಜನರು ಜೀವ ಕಳೆದುಕೊಂಡಿದ್ದರು. ಈ ಆದೇಶವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ವಿಶ್ವಸಂಸ್ಥೆಯ
ಭದ್ರತಾ ಮಂಡಳಿಯು ಲಖ್ವಿಯನ್ನು ಅಂತರರಾಷ್ಟ್ರೀಯ ಉಗ್ರ ಎಂದು ಘೋಷಿಸಿದೆ. ಇಂಥ ವ್ಯಕ್ತಿಗೆ ಜಾಮೀನು ಸಿಕ್ಕಿರುವುದು ದುರದೃಷ್ಟಕರ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಸೇನಾ ಕಾರ್ಯಾಚರಣೆಗೆ ಪ್ರತೀಕಾರವಾಗಿ ತಾಲಿಬಾನ್ ಬಂಡುಕೋರರು ಪೆಶಾವರದ ಶಾಲೆಯಲ್ಲಿ ಮಕ್ಕಳ ಹತ್ಯಾಕಾಂಡ ಮಾಡಿ ಕೇವಲ ಎರಡು ದಿನಗಳು ಕಳೆಯುವಷ್ಟರಲ್ಲಿ ಲಖ್ವಿಗೆ ಜಾಮೀನು ಸಿಕ್ಕಿದೆ. ಹೇಯ ಕೃತ್ಯ ಎಸಗುವ ಉಗ್ರರಿಗೆ ಇದರಿಂದ ಇನ್ನಷ್ಟು ಕುಮ್ಮಕ್ಕು ಸಿಕ್ಕಂತಾಗುತ್ತದೆ’ ಎಂದಿದ್ದಾರೆ.
‘ಲಖ್ವಿ ಜಾಮೀನು ರದ್ದುಪಡಿಸುವುದಕ್ಕೆ ಪಾಕಿಸ್ತಾನ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಭಯೋತ್ಪಾದಕರ ವಿಷಯದಲ್ಲಿ ರಾಜಿ ಸಾಧ್ಯವಿಲ್ಲ ಎನ್ನುವುದನ್ನು ಅದು ಅರ್ಥಮಾಡಿಕೊಳ್ಳಬೇಕು’ ಎಂದು ಕಟುವಾಗಿ ಹೇಳಿದ್ದಾರೆ.
ಕೋರ್ಟ್ ಆದೇಶಕ್ಕೆ ತೀಕ್ಷ್ಣ ಪ್ರತಿಕ್ರಿಯೆ ದಾಖಲಿಸಲು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಸರ್ಕಾರ ಸೂಚಿಸಿದೆ.
ಭಾರತಕ್ಕೆ ಬೇಕಾಗಿರುವ ಉಗ್ರ ಲಖ್ವಿ ವಿರುದ್ಧ ಸಾಕಷ್ಟು ಪುರಾವೆಗಳು ಇರಲಿಲ್ಲ ಎಂದು ಪಾಕಿಸ್ತಾನ ಸರ್ಕಾರ ನೀಡಿದ ಹೇಳಿಕೆಯನ್ನು ಅಕ್ಬರುದ್ದೀನ್ ಆಕ್ಷೇಪಿಸಿದ್ದಾರೆ.
ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಬಳಿ ಶೇ ೯೯ರಷ್ಟು ಪುರಾವೆ ಇದೆ. ಇವುಗಳನ್ನು ಕೋರ್ಟ್ಗೆ ಒದಗಿಸುವುದು ಅಲ್ಲಿನ ಸರ್ಕಾರದ ಹೊಣೆಯಾಗಿದೆ ಎಂದೂ ಅವರು ಹೇಳಿದ್ದಾರೆ.
ಮುಂಬೈ ದಾಳಿಗೆ ಸಂಚು ನಡೆದಿದ್ದು ಪಾಕಿಸ್ತಾನದಲ್ಲಿ. ಸಂಚುಕೋರರು, ದಾಳಿಕೋರರು ಅಲ್ಲಿನವರೇ. ದಾಳಿ ನಡೆಸಿದ ಎಲ್ಲ ಉಗ್ರರಿಗೂ ಪಾಕಿಸ್ತಾನದಲ್ಲಿಯೇ ತರಬೇತಿ ನೀಡಲಾಗಿತ್ತು. ಇಡೀ ಪ್ರಕರಣಕ್ಕೆ ಹಣಕಾಸು ನೆರವು ಹರಿದುಬಂದಿದ್ದು ಕೂಡ ಪಾಕಿಸ್ತಾನದಿಂದಲೇ ಎನ್ನುವುದನ್ನು ಮರೆಯುವಂತಿಲ್ಲ ಎಂದು ಅಕ್ಬರುದ್ದೀನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.