ಇಸ್ಲಾಮಾಬಾದ್(ಐಎಎನ್ ಎಸ್): ಮುಂಬೈ ದಾಳಿಯ ಸಂಚುಕೋರ ಲಷ್ಕರ್–ಎ–ತಯಬಾ (ಎಲ್ಇಟಿ) ಕಾರ್ಯಾಚರಣೆ ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿಯ ಸೆರೆವಾಸ ವಿಸ್ತರಿಸಲಾಗಿದ್ದು, ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಪಾಕ್ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಭಾರತವೂ ಕೂಡ ಸಂಜೋತಾ ಎಕ್ಸ್ ಪ್ರಸ್ ರೈಲು ಸ್ಫೋಟ ಪ್ರಕರಣ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಲು ಇದು ಸಕಾಲ ಎಂದು ಪಾಕಿಸ್ತಾನದ ಪ್ರಧಾನಿ ಸಲಹೆಗಾರ ಎಸ್. ಅಜೀಜ್ ಹೇಳಿದ್ದಾರೆ.
2007ರಲ್ಲಿ ದೆಹಲಿ-ಲಾಹೋರ್ ಮಧ್ಯೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್ ಪ್ರಸ್ ರೈಲು ಸ್ಫೋಟ ನಡೆದಿತ್ತು. ಘಟನೆಯಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರೆಲ್ಲ ಬಹುತೇಕ ಪಾಕಿಸ್ತಾನದವರು.
‘ಮುಂಬೈ ಮೇಲಿನ ದಾಳಿಯಲ್ಲಿ ಮುಗ್ಧ ಜನರು ಜೀವ ಕಳೆದುಕೊಂಡಿದ್ದರು. ಈ ಜಾಮೀನು ಆದೇಶವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಲಖ್ವಿಯನ್ನು ಅಂತರರಾಷ್ಟ್ರೀಯ ಉಗ್ರ ಎಂದು ಘೋಷಿಸಿದೆ. ಇಂಥ ವ್ಯಕ್ತಿಗೆ ಜಾಮೀನು ಸಿಕ್ಕಿರುವುದು ದುರದೃಷ್ಟಕರ’ ಎಂದು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.