ನವದೆಹಲಿ (ಪಿಟಿಐ): ಭಾರತಕ್ಕೆ ಭೇಟಿ ನೀಡುತ್ತಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜತೆ ಉಭಯ ದೇಶಗಳ ಗಡಿ ವಿವಾದ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಈ ನಡುವೆ, ಸರ್ಕಾರಿ ವಾಹನಗಳಲ್ಲಿ ಚೀನಿಯರು ಲಡಾಕ್ನ ಡೆಮ್ಚೊಕ್ ಪ್ರದೇಶ ನುಸುಳಿದ್ದು, ಇಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆ ಕಾಮಗಾರಿಯನ್ನು ತಡೆಯುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
‘ನೀರಾವರಿ ಕಾಮಗಾರಿಗೆ ಚೀನಾ ಕಳೆದ ವಾರದಿಂದ ವಿರೋಧ ವ್ಯಕ್ತಪಡಿಸುತ್ತಿದೆ’ ಎಂದು ಲೆಹ್ ಜಿಲ್ಲಾಧಿಕಾರಿ ಸಿಮ್ರನ್ದೀಪ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಅಕ್ಬರುದ್ದೀನ್ ಅವರನ್ನು ಪ್ರಶ್ನಿಸಿದಾಗ, ‘ಗಡಿ ಕಾಯುವವರು ಇದನ್ನೆಲ್ಲ ನಿಭಾಯಿಸುತ್ತಾರೆ’ ಎಂದಿದ್ದಾರೆ.