ಮುಂಬೈ(ಪಿಟಿಐ): ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಹಾಗೂ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನು ವಿಡಿಯೊವೊಂದರಲ್ಲಿ ಅಪಹಾಸ್ಯ ಮಾಡಿರುವ ಎಐಬಿ ಹಾಗೂ ಹಾಸ್ಯಗಾರ ತನ್ಮಯ್ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವ ಸೇನಾ ಹಾಗೂ ಬಿಜೆಪಿ ಆಗ್ರಹಿಸಿವೆ.
ವಿಡಿಯೊದಲ್ಲಿ ಕೀಳು ಅಭಿರುಚಿ ವ್ಯಕ್ತಪಡಿಸಿರುವ ಎಐಬಿ ಹಾಗೂ ತನ್ಮಯ್ ಭಟ್ ಅವರ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವ ಸೇನೆ ಒತ್ತಾಯಿಸಿದೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸೇನೆ ಮುಖ್ಯಸ್ಥ ನೀಲಂ ಗೊರೆ ಅವರು, ‘ಬುದ್ಧಿಗೆಟ್ಟ ಮನಸ್ಥಿತಿ‘ಯವರು ವಿಡಿಯೊ ಸಿದ್ಧಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಎಂದು ಒತ್ತಾಯಿಸಿದ್ದಾರೆ.
ನೀಲಂ ಗೊರೆ ಅವರು ಮುಂಬೈ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಎಐಬಿ ಹಾಗೂ ತನ್ಮಯ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈಸಂಬಂಧ ಮುಂಬೈ ಬಿಜೆಪಿ ಅಧ್ಯಕ್ಷ ಅಶಿಶ್ ಶೇಲಾರ್ ಅವರು ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದು, ಎಐಬಿ ಹಾಗೂ ತನ್ಮಯ್ ಭಟ್ ವಿರುದ್ಧ ದೂರು ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.