ಸಹಜ, ಸಾವಯವ ಕೃಷಿ ಪುಸ್ತಕ ಮತ್ತು ಪತ್ರಿಕೆಯ ಪ್ರಕಾಶಕರು ಮತ್ತು ಮಾರಾಟಗಾರರಾದ ನಾವು ಕಳೆದ ೧೫-೨೦ ವರ್ಷದಿಂದ ಧಾರವಾಡ ಕೃಷಿ ಮೇಳದಲ್ಲಿ ಪುಸ್ತಕ ಮಳಿಗೆ ಹಾಕುತ್ತಾ ಬಂದಿದ್ದೇವೆ. ಸಾಮಾನ್ಯ ರೈತರು ಸಾವಯವ ಕೃಷಿಗೆ ಹೊರಳುವಲ್ಲಿ ನಮ್ಮ
ಪುಸ್ತಕ, ಪತ್ರಿಕೆಗಳು ಉತ್ತೇಜನ ನೀಡುತ್ತಾ ಬಂದಿವೆ. ಆದರೆ ಈ ಬಾರಿ ನಮ್ಮಂಥವರು ಕೃಷಿಮೇಳದಲ್ಲಿ ಭಾಗವಹಿಸಲಾರದಂಥ ಸ್ಥಿತಿಯನ್ನು ಕೃಷಿ ವಿ.ವಿ ಸೃಷ್ಟಿಸಿದೆ.
ಕಳೆದ ಅನೇಕ ವರ್ಷಗಳಿಂದಲೂ ಪತ್ರಿಕೆ, ಪುಸ್ತಕ ಮಳಿಗೆಗಳಿಗೆ ಕೊಡುತ್ತಿದ್ದ ಶೇ 50ರಷ್ಟು ರಿಯಾಯಿತಿಯನ್ನು ಈ ಬಾರಿ ತೆಗೆದುಹಾಕಿರುವುದೂ ಅಲ್ಲದೆ ಮಳಿಗೆ ದರವನ್ನು ಯದ್ವಾತದ್ವಾ ಹೆಚ್ಚಿಸಲಾಗಿದೆ. ಮಳಿಗೆಗಳಿಗೆ ರಿಯಾಯಿತಿ ಕೊಟ್ಟಲ್ಲಿ ಆಡಿಟ್ ತಕರಾರು ಉಂಟಾಗುತ್ತದೆಂದು ಸರ್ಕಾರ ತಮ್ಮ ಮೇಲೆ ಒತ್ತಡ ತಂದಿರುವುದಾಗಿ ಕುಲಪತಿಗಳು ಹೇಳುತ್ತಿದ್ದಾರೆ. ಇದು ಸಬೂಬು.ಲೆಕ್ಕಪರಿಶೋಧಕರ ಕೆಲಸ ಹಣದ ಅಪವ್ಯಯ, ಮೋಸ, ಭ್ರಷ್ಟಾಚಾರದ ವಾಸನೆ ಹಿಡಿಯುವುದೇ ಹೊರತು ಕೃಷಿ ಮೇಳದ ನೀತಿ ನಿರೂಪಣೆ ಮಾಡುವುದಲ್ಲ ಎನ್ನುವುದನ್ನು ಸಾಮಾನ್ಯ ಜನರೂ ಬಲ್ಲರು.
ಕೃಷಿ ವಿ.ವಿಗೆ ಖಂಡಿತವಾಗಿಯೂ ಪುಸ್ತಕ ಮಳಿಗೆಗಳಿಗೆ ರಿಯಾಯಿತಿ ಕೊಡುವುದು ಹೊರೆಯಾಗುವುದಿಲ್ಲ. ಏಕೆಂದರೆ ಬೀಜ, ಗೊಬ್ಬರ, ಇತರ ಸರಕುಗಳ ಎಷ್ಟೋ ಮಾರಾಟಗಾರರು ಕೃಷಿಮೇಳಗಳಲ್ಲಿ ಪುಕ್ಕಟೆಯಾಗಿ ಮಳಿಗೆ ಪಡೆಯುತ್ತಿದ್ದಾರೆ. ಇಂಥವರಿಗಾಗಿ ಮೀಸಲಿಟ್ಟ ಎಷ್ಟೋ ಮಳಿಗೆಗಳು ಖಾಲಿ ಬಿದ್ದಿರುವುದನ್ನು ಪ್ರತಿ ವರ್ಷವೂ ನೋಡುತ್ತೇವೆ.
ಲಾಭಕೋರರನ್ನು ಓಲೈಸುವ ಈ ಧೋರಣೆಯನ್ನು ಕೈಬಿಟ್ಟು ವಿಷಮುಕ್ತ ಕೃಷಿಯೆಡೆಗೆ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿರುವ ಪ್ರಕಾಶಕರಿಗೆ ರಿಯಾಯಿತಿ ನೀಡುವ ತೀರ್ಮಾನವನ್ನು ಕೃಷಿ ವಿ.ವಿ ಕೈಗೊಳ್ಳಲಿ.