ಚುನಾವಣಾ ಆಯೋಗದ ಅರ್ಜಿ ನಮೂನೆಗಳು ಮಹಿಳೆಯ ಅಸ್ತಿತ್ವವನ್ನೇ ಕಡೆಗಣಿಸಿರುವುದು ಸೋಜಿಗದ ಸಂಗತಿ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಬೇಕಾದ ‘ನಮೂನೆ 2 ಎ’ ಅರ್ಜಿಯಲ್ಲಿ ಪುರುಷ ಅಭ್ಯರ್ಥಿಗಳನ್ನಷ್ಟೇ ಗುರಿಯಾಗಿಸಿಕೊಂಡಂತಹ ಭಾಷೆ ಬಳಕೆ ನಮ್ಮಲ್ಲಿ ಹಾಸುಹೊಕ್ಕಾಗಿರುವ ಪುರುಷ ಪ್ರಧಾನ ಮನೋಭಾವಗಳಿಗೆ ಕನ್ನಡಿ ಹಿಡಿಯುತ್ತದೆ.
ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ. ಆದರೆ ನಾವು ಬಳಸುವ ಭಾಷೆಯಲ್ಲಿ ಮಾತ್ರ ಮಹಿಳೆ ಹೇಗೆ ಅಗೋಚರಳಾಗಿ ಬಿಡುತ್ತಾಳೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ. ಇದು ಹೊಸ ವಿಚಾರವಲ್ಲ. ಆದರೆ ಪ್ರಶ್ನೆ ಏನೆಂದರೆ ಲಿಂಗ ಸೂಕ್ಷ್ಮತೆಯ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದರೂ ಅವನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸುವುದು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು.
ಗಂಡು, ಹೆಣ್ಣು ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನದಡಿ ಕಾರ್ಯ ನಿರ್ವಹಿಸುವಾಗಲೂ ಈ ಲಿಂಗ ತಾರತಮ್ಯದ ಭಾಷೆ ಆಡಳಿತ ವ್ಯವಸ್ಥೆಯಲ್ಲಿ ಉಳಿದುಕೊಂಡೇ ಬಂದಿರುವುದು ವಿಪರ್ಯಾಸ. ಶಾಸಕಾಂಗ ಹಾಗೂ ನ್ಯಾಯಾಂಗಗಳು ಲಿಂಗ ಸಂವೇದನಾಶೀಲತೆ ಮೂಡಿಸುವಂತಹ ಅನೇಕ ನೀತಿಗಳು ಹಾಗೂ ತೀರ್ಪುಗಳನ್ನು ಪ್ರಕಟಿಸುತ್ತಲೇ ಬಂದಿವೆ. ಇವು ಆಡಳಿತದ ಭಾಷೆಯಲ್ಲೂ ಪ್ರತಿಬಿಂಬಿತವಾಗಬೇಕಾಗಿರುವುದು ಸದ್ಯದ ಅಗತ್ಯ.
ಪುರುಷ ಪ್ರಾಧಾನ್ಯತೆಯ ಗ್ರಹಿಕೆಗಳನ್ನೇ ನಮ್ಮ ಭಾಷಾ ಪ್ರಯೋಗಗಳು ಧ್ವನಿಸುತ್ತವೆ. ಇದಕ್ಕೆ ಲಿಂಗ ಸಮಾನತೆ ಪ್ರತಿಪಾದಿಸುವ ನಮ್ಮ ಸಂವಿಧಾನವೂ ಹೊರತಾಗಿಲ್ಲದಿರುವುದು ದುರದೃಷ್ಟಕರ. ಸಂವಿಧಾನದಲ್ಲಿ ಹಲವಾರು ವಿಧಿಗಳಿವೆ. ಈ ವಿಧಿಗಳು ರಾಜ್ಯಪಾಲರು, ಶಾಸಕರು, ಸಂಸತ್ ಸದಸ್ಯರು, ಸಚಿವರು, ಪ್ರಧಾನಿ ಮುಂತಾದವರ ಅಧಿಕಾರಗಳನ್ನು ಕುರಿತು ಹೇಳುವಾಗ ಎಲ್ಲೆಡೆ ‘ಹಿ’ (ಆತ) ಎನ್ನುವ ಪದಪ್ರಯೋಗವೇ ಇದೆ.
‘ಆಕೆ’ ಇಲ್ಲಿ ನಾಪತ್ತೆ. ಹೀಗಾಗಿ ಪುರುಷ ಕೇಂದ್ರಿತ ಅಥವಾ ಪುರುಷ ನಿರ್ದೇಶಿತ ಪದಗಳನ್ನು ಬಳಸಿದಾಗ, ಮಹಿಳೆಯರು ಈ ಕ್ಷೇತ್ರಕ್ಕೆ ಸ್ವಾಗತಾರ್ಹರಲ್ಲ, ಸಶಕ್ತರಲ್ಲ, ಅವರಿಗೆ ಅವಕಾಶವಿಲ್ಲ ಎಂಬಂತಹ ಭಾವನೆಗಳನ್ನೇ ಬಿತ್ತುತ್ತಿರುತ್ತೇವೆ. ಬಿಸಿನೆಸ್ ಮೆನ್, ಪೋಸ್ಟ್ ಮೆನ್, ಪೊಲೀಸ್ ಮೆನ್ ಇತ್ಯಾದಿ ಭಾಷಾ ಪ್ರಯೋಗಗಳಲ್ಲಿರುವ ಮೂಲ ಗ್ರಹಿಕೆ ಏನೆಂದರೆ ಪುರುಷರೇ ಈ ಹುದ್ದೆಗಳಲ್ಲಿ ಇರುವವರು ಎಂಬಂತಹ ಸ್ವೀಕೃತ ಧೋರಣೆ.
ಈ ಹುದ್ದೆಗಳನ್ನು ನಿರ್ವಹಿಸಲು ಅಗತ್ಯವಾದ ಕೌಶಲಗಳು ಪುರುಷರಿಗಷ್ಟೇ ಅಂತರ್ಗತವಾಗಿ ಬಂದದ್ದಲ್ಲ ಎಂಬುದನ್ನು ಈಗಿನ ಆಧುನಿಕ ಯುಗದಲ್ಲಿ ಹೇಳುವುದು ಕಷ್ಟ.ಈ ಕ್ಷೇತ್ರಗಳಲ್ಲೆಲ್ಲಾ ಮಹಿಳೆಯರು ಈಗ ಕಾರ್ಯನಿರ್ವಹಿಸುತ್ತಲೇ ಇದ್ದಾರೆ. ಇದೇ ರೀತಿ ‘ನರ್ಸ್’ ಎಂದಾಕ್ಷಣವೇ ಮಹಿಳೆ ಎಂದುಕೊಳ್ಳುವುದೂ ಸರಿಯಲ್ಲ. ಭಾಷೆಯಲ್ಲಿನ ಪೂರ್ವಗ್ರಹಗಳು ಒಟ್ಟು ಚಿಂತನೆಯ ಧಾಟಿಯ ಮೇಲೂ ಪರಿಣಾಮ ಬೀರುತ್ತದೆ.
ಹೀಗಾಗಿ ಲಿಂಗ ತಾರತಮ್ಯ ಹಾಗೂ ಮಹಿಳೆ ವಿರುದ್ಧದ ಪೂರ್ವಗ್ರಹವನ್ನು ಬಿಂಬಿಸುವ ಭಾಷೆಯನ್ನು ದೋಷ ಎಂಬುದಾಗಿ ಗುರುತಿಸುವ ಪ್ರಜ್ಞೆ ಈಗಾಗಲೇ ಮೂಡಿದೆ. ಅಮೆರಿಕದ ಹಲವು ರಾಜ್ಯಗಳಲ್ಲಿ, ಲಿಂಗಪೂರ್ವಗ್ರಹ ಬಿಂಬಿಸುವ ಪದಪ್ರಯೋಗಗಳನ್ನು ಕಾನೂನಿನ ಪುಸ್ತಕಗಳಿಂದ ಕಿತ್ತುಹಾಕಲಾಗಿರುವುದನ್ನು ನಾವು ಗಮನಿಸಬೇಕು. ಭಾಷೆ ಚಿಂತನೆಯನ್ನು ಪ್ರತಿಬಿಂಬಿಸುವ ಜೊತೆಗೆ ಒಂದು ನಡಾವಳಿಯನ್ನೂ ರೂಪಿಸುತ್ತದೆ.ಹೀಗಾಗಿ ಈ ಬಗ್ಗೆ ಗಂಭೀರ ಪರಿಶೀಲನೆ ಅಗತ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.