ಬೆಂಗಳೂರು: `ವಿಜ್ಞಾನಕ್ಕೆ ಸಂಬಂಧಿತ ಲೇಖನಗಳಿಗೆ ಸಾಹಿತ್ಯ ಮತ್ತು ತತ್ವಶಾಸ್ತ್ರದ ಲೇಪ ಹಚ್ಚುವ ಮೂಲಕ ಓದುಗರನ್ನು ಆಕರ್ಷಿಸುವಂತೆ ಮಾಡುವುದು ದೊಡ್ಡ ಸವಾಲು. ಈ ಸವಾಲನ್ನು ಎಂ.ಆರ್.ನಾಗರಾಜು ಅವರು ಪುಸ್ತಕಗಳ ಮೂಲಕ ಸರಳವಾಗಿಸಿದ್ದಾರೆ~ ಎಂದು ಲೇಖಕ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸರಸ ಸಂವಹನ ಸಮಿತಿಯು ನಗರದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಪ್ರೊ.ಎಂ.ಆರ್.ನಾಗರಾಜು ಅವರ `ಸರಸ ಸಂವಹನ~ ಮತ್ತು `ಓ ನನ್ನ ನೆನಪ~ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
`ವೈಜ್ಞಾನಿಕ ವಿಚಾರಗಳನ್ನು ಮಂಡಿಸುವಾಗ ಜೀವನ ಪ್ರೀತಿ ಬತ್ತಬಾರದು. ಬದುಕಿನ ಪ್ರತಿ ಎಳೆಯಲ್ಲೂ ಅಡಕಗೊಂಡಿರುವ ವಿಜ್ಞಾನ ಮತ್ತು ಪ್ರೀತಿ ಮಿಳಿತಗೊಳಿಸಿ ಓದುಗರಿಗೆ ನೀಡುವುದು ಒಂದು ಕಲೆ. ಇದನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳುವತ್ತ ಯುವ ಲೇಖಕರು ಚಿಂತನೆ ನಡೆಸಬೇಕು~ ಎಂದು ಸಲಹೆ ನೀಡಿದರು.
`ಸಾಮರಸ್ಯದ ಬದುಕಿಗೆ ಸರಸ ಮತ್ತು ವಿಜ್ಞಾನವೆರೆಡು ಅಗತ್ಯವಿದೆ. ಈ ವಿಷಯವನ್ನು ಲೇಖಕರು ಕೃತಿಗಳಲ್ಲಿ ಬಹಳ ಸೊಗಸಾಗಿ ತಿಳಿಸಿದ್ದಾರೆ~ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ` ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿಜ್ಞಾನ ಸಾಹಿತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದ್ದು, ಸೃಜನಶೀಲತೆಯ ಕೊರತೆಯೇ ಕಾರಣವೆಂದು ಹೇಳಲಾಗುತ್ತಿದೆ. ವೈಚಾರಿಕ ವಿಚಾರಗಳ ಜತೆಯಲ್ಲಿ ಸೃಜನಶೀಲತೆಯಿರುವುದನ್ನು ವಿಜ್ಞಾನ ಲೇಖನಗಳಲ್ಲಿ ಗಮನಿಸಬೇಕು~ ಎಂದು ಹೇಳಿದರು.
ಪತ್ರಕರ್ತ ನಾಗೇಶ್ ಹೆಗಡೆ ಮಾತನಾಡಿ, `ವಿಜ್ಞಾನಕ್ಕೆ ಸಂಬಂಧಪಟ್ಟ ವಿಚಾರಗಳು ವಿವಿಧ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಸಂವಹನ ನಡೆಯುವ ಅಗತ್ಯವಿದೆ. ಇದರೊಂದಿಗೆ ವಿಜ್ಞಾನ ಕ್ಷೇತ್ರದ ಮಾಹಿತಿ ಒದಗಿಸುವಲ್ಲಿ ಉತ್ತಮ ಸಂವಹನಕಾರರ ಕೊರತೆಯನ್ನು ಎದುರಿಸುತ್ತಿದ್ದೇವೆ~ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ಕೃಷ್ಣಭಟ್ ಇತರರು ಉಪಸ್ಥಿತರಿದ್ದರು.