‘ವೇಶ್ಯಾವಾಟಿಕೆ, ಕಾನೂನು ಪ್ರಕಾರ ತಪ್ಪಿಲ್ಲದಂಗೆ ಮಾಡಾರಂತೆ! ಹಂಗಾದ್ರೆ ದೊಡ್ಡವರ ಮನೆ ಹೆಣ್ಣುಮಕ್ಕಳನ್ನೂ ಇದಕ್ಕೆ ಕಳಸ್ತಾರಂತಾ? ನಾವ್ ಇದೇ ಕೆಲ್ಸ ಮಾಡ್ಕಂಡೇ ಸಾಯಾದಾ?’ ಎಂದು ಅವಳು ಕೇಳುತ್ತಿದ್ದಳು. ಬಡತನದಿಂದಾಗಿ ಚಿಕ್ಕವಯಸ್ಸಿಗೇ ಅಪ್ಪ ವೇಶ್ಯಾವಾಟಿಕೆಗೆ ನೂಕಿದ್ದ. ವಿದ್ಯಾಭ್ಯಾಸವಿಲ್ಲದೇ, ಸಾಧ್ಯವಾಗುವಂತಹ ಕೆಲಸವೂ ಸಿಗದೆ ಅನಿವಾರ್ಯವಾಗಿ ಲೈಂಗಿಕ ಜೀತದಲ್ಲೇ ಮುಂದುವರಿಯುತ್ತಿದ್ದಾಳೆ. ಅವಳ ಇಂತಹ ಸ್ಥಿತಿಗೆ ಯಾರು ಹೊಣೆ?
‘ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಅದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ! ಮನಸ್ಸನ್ನು ಕೊಂದುಕೊಂಡು ದುಡ್ಡು ಕೊಟ್ಟವರೊಂದಿಗೆ, ಅವರ ಮರ್ಜಿಯಂತೆ ದಿನವೂ ಸುಖ ನೀಡಬೇಕೆಂದರೆ ಸಂತೋಷನಾ? ನಾವೇನು ಯಂತ್ರಗಳಾ? ಹೊಟ್ಟೆ ತುಂಬುವಷ್ಟು ದುಡಿದು ಸಂಪಾದಿಸಲು ಬೇರೆ ವ್ಯವಸ್ಥೆಯಾದರೆ, ಬಡತನದಿಂದ ಇಲ್ಲಿಗೆ ಬಂದಿರುವ ಅರ್ಧದಷ್ಟು ಹುಡುಗಿಯರು ವೇಶ್ಯಾವಾಟಿಕೆ ಬಿಡುತ್ತಾರೆ’ ಎನ್ನುತ್ತಾಳೆ ಈ ಜಾಲಕ್ಕೆ ಬಿದ್ದಿರುವ ಮತ್ತೊಬ್ಬಳು. ಅವಳು ತನ್ನಂಥವರ ಹಾಗೂ ಅವರ ಮಕ್ಕಳ ಒಳಿತಿಗಾಗಿ ಕೈಲಾದಮಟ್ಟಿಗೆ ಆಸರೆಯಾಗಿದ್ದಾಳೆ.
ನಮ್ಮ ನ್ಯಾಯವ್ಯವಸ್ಥೆ ವೇಶ್ಯಾವಾಟಿಕೆಯನ್ನು ವೃತ್ತಿ ಎಂದು ಪರಿಗಣಿಸಿಲ್ಲ. ಬದಲಿಗೆ ‘ಲೈಂಗಿಕಜೀತ’ವೆಂದು ಪ್ರತಿಪಾದಿಸಿದೆ. ಅನಿವಾರ್ಯವಾಗಿ ಇದರಲ್ಲಿ ಬೀಳುವ ಹೆಣ್ಣುಮಕ್ಕಳ ಪರವಾಗಿಯೇ ಕಾನೂನುಗಳು ರೂಪಿತವಾಗಿವೆ. ಆದರೆ ಇದನ್ನು ವಾಣಿಜ್ಯೀಕರಣಗೊಳಿಸುವ ಚಟುವಟಿಕೆಯಲ್ಲಿರುವ ಪುರುಷ- ಮತ್ತು ಮಹಿಳೆ ಇಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಿದೆ. ಹಾಗಿದ್ದರೆ ದಾರಿ ತಪ್ಪಿರುವುದೆಲ್ಲಿ? ಅದನ್ನು ಪರಿಣಾಮಕಾರಿಯಾಗಿ, ಸರಿಯಾಗಿ ಹಾಗೂ ಕಠಿಣವಾಗಿ ಅನುಷ್ಠಾನಗೊಳಿಸುವಲ್ಲಿ. ಇದಾಗದೇ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಮೂಲರೋಗವನ್ನು ಹಾಗೇ ಬಿಟ್ಟು ಕೇವಲ ಜ್ವರಕ್ಕೆ ಚಿಕಿತ್ಸೆ ನೀಡಿದಂತಾಗುತ್ತದೆ.
ವ್ಯಾಪಕವಾಗಿ ಹಬ್ಬುತ್ತಿರುವ ಎಚ್ಐವಿ/ಏಡ್ಸ್ನಂತಹ ಮಾರಕ ರೋಗಗಳು ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಬಹುದೊಡ್ಡ ಬಳುವಳಿ. ಇದನ್ನು ಮೂಲದಲ್ಲಿ ಚಿವುಟಿ ಹಾಕದೆ ಸರ್ಕಾರವೇ ತನ್ನ ಅಂಗಸಂಸ್ಥೆಯಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮೂಲಕ ಹಾಗೂ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಸಮುದಾಯ ಆಧಾರಿತ ಸಂಘಟನೆ, ಸಹಭಾಗಿ ಲೈಂಗಿಕ ಜೀತಗಾರರ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗಿ ರುವವರನ್ನು ನೋಂದಣಿ ಮಾಡಿಸುತ್ತಿದೆ. ಅವರಿಗೆ ಕಾಂಡೊಮ್ ವಿತರಣೆ, ರಕ್ತ ಮತ್ತು ನಿಯಮಿತ ಆರೋಗ್ಯ ತಪಾಸಣೆ, ಎಚ್ಐವಿ/ ಏಡ್ಸ್ ಇನ್ನಿತರ ಗುಪ್ತರೋಗಗಳ ನಿರ್ವಹಣೆಯ ತರಬೇತಿ ಮತ್ತು ಚಿಕಿತ್ಸೆಯ ಮೂಲಕ ಯಥಾ-ಸ್ಥಿತಿಕಾಯ್ದುಕೊಳ್ಳುತ್ತಾ ಸುರಕ್ಷಿತ ಲೈಂಗಿಕತೆಗೆ ಸಹಕಾರಿಯಾಗಿದೆ.
ಇದಕ್ಕಾಗಿಯೇ ಬಜೆಟ್ನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನೂ ತೆಗೆದಿರಿಸಿ, ರೋಗಗಳ ನಿಯಂತ್ರಣದ ಹೆಸರಿನಲ್ಲಿ ಬೇಡಿಕೆ ಮತ್ತು ಪೂರೈಕೆಗಳನ್ನೂ ನಿರ್ವಹಿಸಲಾಗುತ್ತಿದೆ. ಹೀಗೆಂದೇ ವೇಶ್ಯಾವಾಟಿಕೆಗೆ ಬೀಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ರೋಗ ನಿಯಂತ್ರಣದ ಹೆಸರಿನ ಜಾಲವೂ ಹಬ್ಬುತ್ತಿದೆ.
ಕರ್ನಾಟಕದಲ್ಲಿ ಸದ್ಯ ೨.೫೦ ಲಕ್ಷಕ್ಕೂ ಅಧಿಕ ಎಚ್ಐವಿ ಪೀಡಿತರಿದ್ದಾರೆ. ೧೯೯೮–-೨೦೧೩ರ ವರೆಗೆ ೨೯,೦೦೦ ರೋಗಿಗಳು ಮೃತಪಟ್ಟಿದ್ದಾರೆ. ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ! ನವೆಂಬರ್ ೨೦೧೨ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದ ಲೈಂಗಿಕ ಜೀತಗಾರ್ತಿಯರ ಸಂಖ್ಯೆ ೭೯,೧೬೯. ಇವರಲ್ಲಿ ಸಲಿಂಗಕಾಮಿ ಪುರುಷ ಲೈಂಗಿಕ ಜೀತಗಾರರ ಸಂಖ್ಯೆ ೨೫,೨೪೪. ಇದಲ್ಲದೇ ಲಕ್ಷಾಂತರ ಮಂದಿ ರೋಗವಾಹಕರಿದ್ದಾರೆ.
ಈ ಲೈಂಗಿಕ ಜೀತಗಾರ್ತಿಯರಲ್ಲಿ ಹೆಚ್ಚಿನವರು ತಳ ಸಮುದಾಯ ಇಲ್ಲವೇ ಹಿಂದುಳಿದ ವರ್ಗದವರು ಎಂಬುದು ಅಧ್ಯಯನದಿಂದ ತಿಳಿಯುತ್ತದೆ. ಉದಾಹರಣೆಯಾಗಿ ಒಂದು ಜಿಲ್ಲೆಯನ್ನು ನೋಡುವುದಾದರೆ, ೨,೭೯೧ ಲೈಂಗಿಕ ಜೀತಗಾರ್ತಿಯರಲ್ಲಿ ೫೯೯- ಮಂದಿ ಪರಿಶಿಷ್ಟ ಜಾತಿ, ೬೯೮- ಮಂದಿ ಪರಿಶಿಷ್ಟ ಪಂಗಡ, ೭೯೯ ಮಂದಿ -ಹಿಂದುಳಿದ ಜಾತಿ, ೬೯೬- ಮಂದಿ ಇತರ ಸಮುದಾಯಗಳಿಗೆ ಸೇರಿದವರು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಸಂಖ್ಯೆಯೂ ಅಧಿಕ. ಬೇರೆ ಜಿಲ್ಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಆರ್ಥಿಕ-ವಾಗಿ, ಸಾಮಾಜಿಕವಾಗಿ ಅಂಚಿಗೆ ನೂಕಿಸಿಕೊಂಡ ಹೆಣ್ಣು ಮಕ್ಕಳು ಈ ಪ್ರಮಾಣದಲ್ಲಿ ಲೈಂಗಿಕ ಜೀತಕ್ಕೆ ಬಿದ್ದಿರುವುದಕ್ಕೆ ಕಾರಣ ನಮ್ಮ ಸರ್ಕಾರಗಳು ಇವರಿಗೆ ಆರ್ಥಿಕ ಭದ್ರತೆ ಇರುವ ಸೂಕ್ತ ಉದ್ಯೋಗವನ್ನು ಇದುವರೆಗೆ ಕೊಟ್ಟೇ ಇಲ್ಲದಿರುವುದು. ಅಪರಾಧಗಳ ಕುರಿತು ಸರ್ಕಾರದ ಬಳಿ ಇಷ್ಟೆಲ್ಲಾ ದಾಖಲೆಗಳಿದ್ದಾಗಲೂ ನಿಯಂತ್ರಣ ಏಕೆ ಸಾಧ್ಯವಾಗುತ್ತಿಲ್ಲ?
ನೋಂದಣಿಯಾಗುವ ಹೆಚ್ಚಿನವರು ಸುರಕ್ಷಿತ ಲೈಂಗಿಕತೆಗೆ ಅನುಕೂಲ ಮತ್ತು ಅರಿವು ಇಲ್ಲದೇ, ಬಡತನದ ಕಾರಣಕ್ಕಾಗಿಯೇ ಇಲ್ಲಿಗೆ ಬಂದವರು. ನಮ್ಮ ಕಾಳಜಿಯು ಬಡತನ, ಅನಕ್ಷರತೆ, ನಿರುದ್ಯೋಗ, ಪ್ರೀತಿ-, ಕೆಲಸದ ಆಕರ್ಷಣೆಯಿಂದ ಮೋಸಗೊಂಡು, ಕೌಟುಂಬಿಕ--, ಸಾಮಾಜಿಕ ಕಾರಣಗಳಿಗೆ ವೇಶ್ಯಾವಾಟಿಕೆ ಎಂಬ ಜಾಲದೊಳಗೆ ಬಿದ್ದಿರುವ, ಬೀಳುತ್ತಿರುವ ಮಕ್ಕಳು ಮತ್ತು ಮಹಿಳೆಯರ ಕುರಿತಾದದ್ದು ಮಾತ್ರವೇ ಆಗಿದ್ದಾಗ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅದಿಲ್ಲದೇ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಇವರನ್ನೆಲ್ಲ ಶಾಶ್ವತವಾಗಿ ಲೈಂಗಿಕಜೀತದ ನರಕಕ್ಕೆ ದೂಡಿದಂತಾಗುತ್ತದೆ.
ಯಾವ ನೋಂದಣಿ ಪ್ರಕ್ರಿಯೆಯ ಒಳಗೂ ದಾಖಲಾಗದೇ ಹೊರಗುಳಿದವರ ಸಂಖ್ಯೆ ಇದರ ದುಪ್ಪಟ್ಟು ಇದೆ. ಜತೆಗೆ, ಇದರಲ್ಲಿ ಹೈಟೆಕ್ ವೇಶ್ಯಾವಾಟಿಕೆ, ಕಾಲ್ಗರ್ಲ್ಗಳು, ದಂಧೆಯ ಲೇಬಲ್ ಇಲ್ಲದ ಸಭ್ಯ-ನಾಗರಿಕ ವ್ಯಭಿಚಾರವೂ ಸೇರಿದೆ. ಮೋಜಿಗಾಗಿ, ವೈಭವೋಪೇತ ಜೀವನದ ಆಕರ್ಷಣೆಗಾಗಿ, ಸುಲಭದ ಹಣ ಗಳಿಕೆಗಾಗಿ ಇವರು ತಾವಾಗಿಯೇ ಇದನ್ನು ಆಯ್ದುಕೊಳ್ಳುತ್ತಿದ್ದಾರೆ. ವೇಶ್ಯಾವಾಟಿಕೆ ವ್ಯಾಪಕವಾಗಿ ಹಬ್ಬುತ್ತಿದೆ. ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ, ಹೆಣ್ಣಿನ ದೇಹವನ್ನು ಮಾಧ್ಯಮದ ಮೂಲಕ ಸರಕಾಗಿ ವಿಜೃಂಭಿಸುತ್ತಾ, ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋದಿಸಲಾರಂಭಿಸಿದ ನಂತರ ಈ ಜಾಲಕ್ಕೆ ನೂಕಿಸಿಕೊಳ್ಳುವವರು ಮತ್ತು ತಾವಾಗಿಯೇ ವೇಶ್ಯಾವಾಟಿಕೆಯನ್ನು ಆಯ್ದುಕೊಳ್ಳುವವರ ಪ್ರಮಾಣ ಶೇ ೫0ರಷ್ಟು ಹೆಚ್ಚಿದೆ. ವಾಣಿಜ್ಯೀಕೃತ ವೇಶ್ಯಾವಾಟಿಕೆ ಮತ್ತು ಕಾಮಪ್ರಚೋದಕಗಳ ದೊಡ್ಡ ಮಾಫಿಯಾ, ಅಂಕೆಯೇ ಇಲ್ಲದೆ ಬೆಳೆದಿರುವಾಗ ಕಡಿವಾಣ ಹಾಕಬೇಕಾದುದು ಯಾರು?
ವಿಶ್ವಸಂಸ್ಥೆಯ ಹ್ಯೂಮನ್ ರೈಟ್ಸ್ ವಾಚ್ ವರದಿಯ ಪ್ರಕಾರ, ಇದುವರೆಗೆ ಭಾರತದ ಒಂದೂವರೆ ಕೋಟಿಗೂ ಹೆಚ್ಚು ಹೆಣ್ಣುಮಕ್ಕಳನ್ನು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಗೆ ದೂಡಲಾಗಿದೆ. ಇವರಲ್ಲಿ ಶೇ ೪0ರಷ್ಟು ಮಂದಿ ಬಾಲಕಿಯರು. ಮಾನವಹಕ್ಕುಗಳ ಬಗೆಗೆ ಗಂಟಲು ಹರಿಯುವಂತೆ ಬೊಬ್ಬೆ ಹೊಡೆಯಲಾಗುತ್ತಿದೆ, ಆದರೆ ಹೆಣ್ಣು ಈ ಹಕ್ಕುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲವೇ?- ಸಂಕಟದಿಂದ ಕೇಳಬೇಕಾಗಿದೆ.
ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದೆಂದರೆ ಅದನ್ನು ಪ್ರೋತ್ಸಾಹಿಸಿದಂತಲ್ಲವೆಂದು ನಾವೆಷ್ಟೇ ಹೇಳಿದರೂ ಜಾಗತೀಕರಣದ ವಿಕೃತಿಗಳು, ಸೆಕ್ಸ್ ಟೂರಿಸಂ ಇಂದು ಬಹಳಷ್ಟು ದೇಶಗಳ ಹೆಚ್ಚಿನ ಆದಾಯ ಮೂಲವಾಗಿರುವುದರಿಂದ ಹೆಣ್ಣನ್ನೂ ಸರಕೆಂದು ಪರಿಗಣಿಸಿ ಅವಳಿಗೆ ಸಂಬಂಧಿಸಿದ ಅಪಾಯಗಳನ್ನು ನಿರ್ಲಕ್ಷಿಸಿ ಸರ್ಕಾರಗಳೇ ನಡೆಸುವ ವೇಶ್ಯಾವಾಟಿಕೆಯಾಗಿಬಿಡುತ್ತದೆ! ಇದನ್ನು ವಿಸ್ತೃತವಾಗಿ ಬೆಳೆಸುವ, ಮಧ್ಯಸ್ಥಿಕೆ ಮಾಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವ ಕೆಲ ಸಾಂಸ್ಥಿಕ ವ್ಯವಸ್ಥೆಗಳು, ಲೈಂಗಿಕಜೀತವನ್ನೇ ವೃತ್ತಿ ಎಂದೂ, ಇವರನ್ನು ಲೈಂಗಿಕ ಕಾರ್ಮಿಕರೆಂದೂ ಬಿಂಬಿಸುತ್ತಿವೆ.
ಇದೇ ಸಂಸ್ಥೆಯವರೋ, ಲೈಂಗಿಕ ಜೀತಗಾರರೋ, ಮಧ್ಯವರ್ತಿಗಳೋ ತಮ್ಮ ಮಕ್ಕಳಿಗೆ ಮಾತ್ರ ಈ ಘನವಾದ ವೃತ್ತಿ ಬೇಡವೆನ್ನುತ್ತಾರೆ. ಹಾಗಿದ್ದರೆ ಲೈಂಗಿಕ ಜೀತವೆಂಬುದು ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವುದಲ್ಲವೇ? ಇದನ್ನು ಕಾನೂನುಬದ್ಧಗೊಳಿಸಲು ಯೋಚಿಸುತ್ತಿರುವವರು ಲೈಂಗಿಕಜೀತಗಾರ್ತಿಯರ ಆರ್ಥಿಕ-, ಸಾಮಾಜಿಕ ಜೀವನ ಸುಧಾರಣೆಗೇಕೆ ಯೋಚಿಸುತ್ತಿಲ್ಲ? ದೇವದಾಸಿ, ಜೋಗಿಣಿ, ಬಸವಿ ಪದ್ಧತಿಗಳು ಮಾನವಹಕ್ಕುಗಳ ಉಲ್ಲಂಘನೆಯೆಂದು ನಿರ್ಬಂಧಿಸಿ ಪುನರ್ವಸತಿ ಮಾಡಲಾಗುತ್ತಿದೆ. ಅದೇ ನೀತಿ ಇಲ್ಲಿಗೂ ಅನ್ವಯಿಸಬೇಕು.
ದಶಕಗಳಿಂದ ವೇಶ್ಯಾವಾಟಿಕೆ ಕುರಿತು ನಮ್ಮ ನ್ಯಾಯಾಲಯಗಳಿಂದ ಬಂದ ತೀರ್ಪುಗಳೆಲ್ಲವೂ ಹೆಣ್ಣುಮಕ್ಕಳನ್ನು ಈ ಜೀತಕ್ಕೆ ಬಲವಂತದಿಂದಲೋ, ಪ್ರಚೋದಿಸಿಯೋ, ಆರ್ಥಿಕ ಸಂಕಷ್ಟದ ಕಾರಣಕ್ಕೋ ತಳ್ಳುವ ಮೂಲಕ ಅವರನ್ನು ನಿರಂತರ ಅತ್ಯಾಚಾರಕ್ಕೆ ಗುರಿಪಡಿಸಲಾಗಿದೆ ಎಂದು ಖಂಡಿಸಿ, ಮಾರ್ಗದರ್ಶಿ ಸೂತ್ರಗಳನ್ನೂ ಕೊಟ್ಟಿತ್ತು. ಅವುಗಳಲ್ಲಿ ಮುಖ್ಯವಾದವು:
* ಬಡತನದ ಕಾರಣಕ್ಕೆ ವೇಶ್ಯಾವಾಟಿಕೆಗೆ ಇಳಿಯುತ್ತಿರುವವರಿಗಾಗಿ ಪರಿಣಾಮಕಾರಿ ಪುನರ್ವಸತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿ, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು.
* ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಅಪರಾಧದ ನಿಗ್ರಹಕ್ಕೆ, ತಲೆಹಿಡುಕರ, ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಅನುಷ್ಠಾನಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
*ಚಿಕ್ಕ ವಯಸ್ಸಿನವರನ್ನು ಬಳಸಿಕೊಳ್ಳುವ ವೇಶ್ಯಾವಾಟಿಕೆ ಸಂಪೂರ್ಣ ನಿರ್ಮೂಲನೆಯಾಗಬೇಕು. ವೇಶ್ಯಾ ವೃತ್ತಿಯಲ್ಲಿಇರುವವರ ಮಕ್ಕಳ ರಕ್ಷಣೆ, ಪೋಷಣೆ, ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಆದರೆ, ಇವು ದಶಕಗಳಿಂದ ಅನುಷ್ಠಾನಗೊಳ್ಳದೆ ಕಡತಗಳಲ್ಲೇ ಕುಳಿತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.