ಬೆಂಗಳೂರು: ‘ಮಹಾರಾಷ್ಟ್ರದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಗೆ ನೈತಿಕ ಬೆಂಬಲ ನೀಡುವುದರ ಜೊತೆಗೆ ₨2 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿಯೂ ಇದು ಜಾರಿಗೆ ಬರಬೇಕು’ ಎಂದು ನ್ಯಾಯವಾದಿ ಮತ್ತು ಮಹಿಳಾವಾದಿ ಫ್ಲೇವಿಯಾ ಆಗ್ನೆಸ್ ಹೇಳಿದರು.
ಲೈಂಗಿಕ ಹಿಂಸೆಯನ್ನು ವಿರೋಧಿಸಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಆದರೂ ಅತ್ಯಾಚಾರ ಎಸಗಿರುವವರಿಗೆ ಶಿಕ್ಷೆ ಆಗಿರುವ ಪ್ರಮಾಣ ಕಡಿಮೆ. 16 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ ಎಂದರು.
ಅತ್ಯಾಚಾರಗಳನ್ನು ನಿಯಂತ್ರಿಸಲು ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮನಸ್ಥಿತಿ ಬದಲಾಗಬೇಕು. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಸಮಾವೇಶ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ‘ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಬೇರೆಲ್ಲೊ ಕಾರಣ ಹುಡುಕುವ ಅಗತ್ಯ ಇಲ್ಲ. ಅದಕ್ಕೆ ಸಮಾಜ, ಸರ್ಕಾರವೇ ಕಾರಣ. ಅತ್ಯಾಚಾರದಂತಹ ಸೂಕ್ಷ್ಮ ಸಮಸ್ಯೆಯನ್ನು ಕಾನೂನಿನ ಮೂಲಕ ಮಾತ್ರ ಪರಿಹರಿಸಲು ಸಾಧ್ಯ’ ಎಂದು ಹೇಳಿದರು.
ಅಸಮಾನತೆ ಮತ್ತು ಲಿಂಗ ತಾರತಮ್ಯದ ನಡುವೆ ನೇರ ಸಂಬಂಧ ಇದೆ. ಅತ್ಯಾಚಾರಕ್ಕೊಳಗಾದವರಲ್ಲಿ ಬಹುತೇಕರು ಕೆಳಜಾತಿಯವರಾಗಿದ್ದಾರೆ. ಈ ಸಾಮಾಜಿಕ ತಾರತಮ್ಯ, ದೌರ್ಜನ್ಯದ ವಿರುದ್ಧ ಹೋರಾಟ ನಡೆಯಬೇಕಾದ ಅಗತ್ಯ ಇದೆ ಎಂದು ಹೇಳಿದರು. ಲೇಖಕಿ ದು.ಸರಸ್ವತಿ ಅವರು ಮಾತನಾಡಿ, ‘ಅತ್ಯಾಚಾರ ನಮ್ಮ ಸಮಾಜಕ್ಕೆ ಅಂಟಿರುವ ಕಾಯಿಲೆ. ಮಕ್ಕಳ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗುವವರಿಗೆ ಏನು ಪ್ರೇರಣೆ ಎಂದು ತಿಳಿಯುತ್ತಿಲ್ಲ. ಕೊಳಕು ಮನಸ್ಸುಗಳು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ’ಎಂದರು. ಸಂಘಟನೆಯ ಸದಸ್ಯರು ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ವಿಚಾರಣೆ ನಡೆಸಿ ಅನ್ಯಾಯಕ್ಕೊಳಗಾಗದವರಿಗೆ ನ್ಯಾಯ ಒದಗಿಸುವುದು ನ್ಯಾಯಾಲಯದ ಜವಾಬ್ದಾರಿ. ವಿಪರ್ಯಾಸವೆಂದರ ಐವರು ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದು ಸಮಾಜಕ್ಕೆ ಯಾವ ಸಂದೇಶ ಕೊಡುತ್ತದೆ
–ಡಾ.ಕೆ. ಮರುಳಸಿದ್ದಪ್ಪ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.