ನವದೆಹಲಿ (ಪಿಟಿಐ): ವಿವಾದಕ್ಕೆ ಆಸ್ಪದವಿಲ್ಲದೇ ಒಮ್ಮತದ ನಿರ್ಧಾರ ತೆಗೆದುಕೊಂಡರೆ ಲೋಕಪಾಲರಾಗಿ ಕರ್ತವ್ಯ ನಿರ್ವಹಿಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಪಿ.ಸದಾಶಿವಂ ಹೇಳಿದ್ದಾರೆ.
ಒಂಬತ್ತು ತಿಂಗಳ ಅಧಿಕಾರಾವಧಿ ಪೂರ್ಣಗೊಳಿಸಿದ ಬಳಿಕ ಅವರು ಶನಿವಾರ (ಏಪ್ರಿಲ್್ 26) ಸೇವೆಯಿಂದ ನಿವೃತ್ತರಾಗಲಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಅಥವಾ ಲೋಕಪಾಲರಾಗಿ ಸೇವೆ ಸಲ್ಲಿಸುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನ್ಯಾಯಮೂರ್ತಿ ನೇಮಕದಲ್ಲಿ ಈಗಿರುವ ಪದ್ಧತಿಯೇ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನ್ಯಾಯಾಂಗದ ಬಗ್ಗೆ ಸರಿಯಾಗಿ ತಿಳಿವಳಿಕೆ ಇಲ್ಲದ ಹೊರಗಿನವರು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ. ಮುಖ್ಯನ್ಯಾಯಮೂರ್ತಿ ಅಧಿಕಾರಾವಧಿ ಕನಿಷ್ಠ ಎರಡು ವರ್ಷಗಳ ವರೆಗೆ ಇರಬೇಕು. ಈ ಅವಧಿಯಲ್ಲಿ ಅವರು ಹೆಚ್ಚಿನ ಕೆಲಸ ಮಾಡಬಹುದು’ ಎಂದು ಹೇಳಿದ್ದಾರೆ.
‘ನ್ಯಾಯಾಂಗದ ಉನ್ನತ ಸ್ಥಾನದಲ್ಲಿ ಮಹಿಳೆಯರು ಹಾಗೂ ಸಮಾಜದ ದುರ್ಬಲ ವರ್ಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು. ನಾನು ಈ ಸಂಬಂಧ ಹೈಕೋರ್ಟ್್ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇನೆ.
ವಯೋಮಿತಿ ಹಾಗೂ ಮತ್ತಿತರ ಮಾನದಂಡಗಳಲ್ಲಿ ಅವರಿಗೆ ತುಸು ವಿನಾಯಿತಿ ನೀಡುವಂತೆಯೂ ಸೂಚಿಸಿದ್ದೇನೆ’ ಎಂದು ಸದಾಶಿವಂ ಹೇಳಿದ್ದಾರೆ. ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ 18 ವರ್ಷ ಸೇವೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಆರು ವರ್ಷ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿದ್ದಾರೆ.