ನವದೆಹಲಿ(ಪಿಟಿಐ): ಬುಧವಾರದಿಂದ ಆರಂಭವಾಗಬೇಕಿದ್ದ 16ನೇ ಲೋಕಸಭೆಯ ಮೊದಲ ಅಧಿವೇಶನವನ್ನು ಕೇಂದ್ರ ಸಚಿವ ಗೋಪಿನಾಥ ಮುಂಡೆ ನಿಧನದಿಂದಾಗಿ ಒಂದು ದಿನ ಮುಂದೂಡಲಾಗಿದೆ.
ಬುಧವಾರದ ಬದಲು ಗುರುವಾರ ಅಧಿವೇಶನ ಆರಂಭವಾಗಲಿದೆ. ಹೊಸ ವೇಳಾಪಟ್ಟಿಯಂತೆ ಗುರುವಾರ (ಜೂನ್ 5) ನೂತನ ಸಂಸದರ ಪ್ರಮಾಣ ವಚನ ನಡೆಯಲಿದೆ. ಅಂದು ರಾತ್ರಿಯವರೆಗೆ ನಡೆಯುವ ಪ್ರಮಾಣ ವಚನ ಶುಕ್ರವಾರವೂ (ಜೂನ್ 6) ಮುಂದುವರಿಯಲಿದೆ ಎಂದು ಸಚಿವ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಜೂ. 6 ಮಧ್ಯಾಹ್ನದ ನಂತರ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಲ್ಲಿಯವರೆಗೆ ಹಂಗಾಮಿ ಸ್ಪೀಕರ್ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಕಲಾಪ ನಡೆಸಿಕೊಡಲಿದ್ದಾರೆ.
ಲೋಕಸಭೆ ಅಧಿವೇಶನ ಆರಂಭಕ್ಕೂ ಮೊದಲು ಕಮಲ್ನಾಥ್ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಮಾಣವಚನ ಬೋಧಿಸಲಿದ್ದಾರೆ.
ಜೂ.9 ರಂದು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಉದ್ದೇಶಿಸಿ ಮಾತ ನಾಡಲಿದ್ದಾರೆ.
ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆ ಈ ಮೊದಲೇ ನಿಗದಿಯಾದಂತೆ ಜೂ.10 ಮತ್ತು 11 ರಂದು ನಡೆಯಲಿದೆ. ರಾಜ್ಯಸಭೆಯ ಅಧಿವೇಶನವನ್ನೂ ಒಂದು ದಿನ ಮುಂದೂಡಲಾಗಿದೆ.