ಬೆಂಗಳೂರು: ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ದುರ್ನಡತೆ ಸಾಬೀತಾದಾಗ ಅವರನ್ನು ಪದಚ್ಯುತಿಗೊಳಿಸಲು ಸದನದ ಮೂರನೆಯ ಎರಡರಷ್ಟು ಸದಸ್ಯರ ಸಮ್ಮತಿ ಬೇಕು ಎಂಬ ಅಂಶ ಒಳಗೊಂಡ ಲೋಕಾಯುಕ್ತ ತಿದ್ದುಪಡಿ ಮಸೂದೆಗೆ ವಿಧಾನಸಭೆ ಗುರುವಾರ ಅನುಮೋದನೆ ನೀಡಿತು.
ಮಸೂದೆಯನ್ನು ವಿಧಾನಸಭೆಯಲ್ಲಿ ಜುಲೈ 24ಕ್ಕೆ ಮಂಡಿಸಲಾಗಿತ್ತು. ಆದರೆ ಅದರಲ್ಲಿ, ‘ಲೋಕಾಯುಕ್ತರ ಪದಚ್ಯುತಿಗೆ ಸದನದಲ್ಲಿ ಸರಳ ಬಹುಮತ (113 ಜನ) ದೊರೆತರೆ ಸಾಕು’ ಎಂಬ ಅಂಶ ಇತ್ತು. ನಂತರ ಅದರಲ್ಲಿ ಬದಲಾವಣೆ ಮಾಡಿ, ‘ಮೂರನೆಯ ಎರಡರಷ್ಟು ಸದಸ್ಯರ (150 ಜನ) ಸಮ್ಮತಿ ಬೇಕು’ ಎಂಬ ತಿದ್ದುಪಡಿ ಮಂಡಿಸಿತು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಬೆಂಬಲ ದೊರೆಯಿತು.
‘ಈಗಿನ ಲೋಕಾಯುಕ್ತರನ್ನು ಕೆಳಗಿಳಿಸಲು, ಈಗಿರುವ ಲೋಕಾಯುಕ್ತ ಕಾಯ್ದೆಯನ್ನೇ ಒಂದು ಬಾರಿಗೆ ರದ್ದು ಮಾಡೋಣ. ಹೊಸ ಲೋಕಾಯುಕ್ತರನ್ನು ಎಷ್ಟು ದಿನಗಳಲ್ಲಿ ನೇಮಿಸುವುದು ಎಂಬುದನ್ನೂ ಈಗಲೇ ನಿರ್ಧರಿಸೋಣ’ ಎಂಬ ಸಲಹೆಯನ್ನು ಕಾಂಗ್ರೆಸ್ಸಿನ ರಮೇಶ್ ಕುಮಾರ್ ನೀಡಿದರು.