ನವದೆಹಲಿ (ಪಿಟಿಐ): ವರದಕ್ಷಿಣೆ ನಿಗ್ರಹ ಕಾನೂನು ದುರ್ಬಳಕೆಯಾಗುತ್ತಿರುವುದು ಹೆಚ್ಚುತ್ತಿರುವುದರಿಂದ ಕೇಂದ್ರವು ಇದಕ್ಕೆ ಸೂಕ್ತ ತಿದ್ದುಪಡಿ ತರಲು ಚಿಂತನೆ ನಡೆಸಿದೆ.
ಸುಳ್ಳು ದೂರು ನೀಡುವವರಿಗೆ ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶ ಉದ್ದೇಶಿತ ಕಾನೂನಿನಲ್ಲಿ ಇರುತ್ತದೆ. ಅಲ್ಲದೇ ವರದಕ್ಷಿಣೆ ಪದದ ಅರ್ಥವನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ. ಅಂದರೆ, ಮದುವೆಗೆ ಸಂಬಂಧಿಸಿದಂತೆ ಕೊಡುವ ಸಂಪತ್ತು ಎನ್ನುವ ವ್ಯಾಖ್ಯೆಗೆ ಬದಲಾಗಿ ‘ ಮದುವೆಗೆ ಮೊದಲು, ಮದುವೆಯ ಸಂದರ್ಭದಲ್ಲಿ, ಮದುವೆಯ ನಂತರ ಯಾವುದೇ ಸಮಯದಲ್ಲಿ ನೀಡಲಾಗುವ ಸಂಪತ್ತು’ ಎಂದು ಮರುವ್ಯಾಖ್ಯಾನಿಸಲಾಗುತ್ತದೆ.
ವರದಕ್ಷಿಣೆ ನಿರ್ಬಂಧ ಕಾಯ್ದೆ-ಯನ್ನು ಇನ್ನಷ್ಟು ಬಲಪಡಿಸುವ ದಿಸೆಯಲ್ಲಿಯೂ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಚಿವಾಲಯ ಆಲೋಚಿಸುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಮಹಿಳೆಯರು ವಿವಿಧ ಕಾರಣಕ್ಕಾಗಿ ಗಂಡ ಹಾಗೂ ಅತ್ತೆ ಮನೆಯವರ ವಿರುದ್ಧ ಸುಳ್ಳು ದೂರು ನೀಡಿರುವ ಪ್ರಕರಣಗಳು ಕೂಡ ಸಚಿವಾಲಯದ ಗಮನಕ್ಕೆ ಬಂದಿವೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ( ವರದಕ್ಷಿಣೆ ಕಿರುಕುಳ) ದೂರು ದಾಖಲಾದ ತಕ್ಷಣವೇ ವ್ಯಕ್ತಿಯನ್ನು ಬಂಧಿಸುವಂತಿಲ್ಲ. ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ತಿದ್ದುಪಡಿ ಕಾನೂನಿನಲ್ಲಿ ಏನಿರುತ್ತದೆ?
ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಉಡುಗೊರೆಗಳ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಇದಕ್ಕೆ ತಪ್ಪಿದಲ್ಲಿ ವಧು–ವರ ಮಾತ್ರವಲ್ಲ, ಅವರ ಪೋಷಕರು ಕೂಡ ಮೂರು ವರ್ಷಗಳ ಜೈಲು ಶಿಕ್ಷೆ ಅನುಭಸಬೇಕಾಗುತ್ತದೆ ಮತ್ತು ಭಾರಿ ದಂಡ ತೆರಬೇಕಾಗುತ್ತದೆ.