ನವದೆಹಲಿ (ಪಿಟಿಐ): ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ಅನೇಕ ಸಂದರ್ಭಗಳಲ್ಲಿ ದುರ್ಬಳಕೆಯಾಗುತ್ತಿದೆ. ಆದ ಕಾರಣ ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಐಪಿಸಿ 498 ಎ ಸೆಕ್ಷನ್ ಅಡಿ ಮೊಕದ್ದಮೆ ದಾಖಲಿಸುವಾಗ ವಿವೇಚನೆ ಬಳಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.
498 ಎ ಸೆಕ್ಷನ್ ಅಡಿ (ವರದಕ್ಷಿಣೆ ಕಿರುಕುಳ) ದೂರು ದಾಖಲಾದ ತಕ್ಷಣವೇ ರೂಢಿ ಎಂಬಂತೆ ಆರೋಪಿಗಳನ್ನು ಬಂಧಿಸಬಾರದು. ಅಪರಾಧ ಪ್ರಕ್ರಿಯಾ ಸಂಹಿತೆ ೪೧ನೇ ಸೆಕ್ಷನ್ ಅನ್ವಯ ( ವಾರಂಟ್್ ಇಲ್ಲದೇ ಬಂಧಿಸುವ ಅಧಿಕಾರ) ಬಂಧನ ಅಗತ್ಯವೇ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಕ್ರಮ ಕೈಗೊಳ್ಳುವಂತೆ ಪೊಲೀಸ್್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ನಿರ್ದೇಶನ ನೀಡಿದೆ.
ವರದಕ್ಷಿಣೆ ನಿಷೇಧ ಕಾಯ್ದೆಗೆ ಸಂಬಂಧಿಸಿ ಜುಲೈ ೩ರಂದು ಸುಪ್ರೀಂಕೋರ್ಟ್್ ನೀಡಿದ್ದ ಆದೇಶವನ್ನು ಉಲ್ಲೇಖಿಸಿರುವ ಸಚಿವಾಲಯ, ‘ಪೊಲೀಸ್್ ಅಧಿಕಾರಿಗಳು ಈ ಆದೇಶ ಪಾಲಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ; ಈ ಸಂಬಂಧ ಇಲಾಖಾ ವಿಚಾರಣೆಯನ್ನೂ ಎದುರಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿದೆ.
ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ‘ಅನೇಕ ಸಂದರ್ಭಗಳಲ್ಲಿ ಮಹಿಳೆಯರು ಇದನ್ನು ತಮ್ಮ ರಕ್ಷಣೆಗೆ ಬದಲಾಗಿ ಬೆದರಿಸುವ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂಥ ಪ್ರಕರಣಗಳಲ್ಲಿ ಆರೋಪಿಯನ್ನು ಏಕಾಏಕಿ ಬಂಧಿಸದೇ ವಿವೇಚನೆಯಿಂದ ನಡೆದುಕೊಳ್ಳಬೇಕು’ ಎಂದು ಹೇಳಿತ್ತು.
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯ ಬಂಧನಕ್ಕೆ ಸಮರ್ಥನೆಯಾಗುವ ಅಂಶಗಳು ಮತ್ತು ಪುರಾವೆಗಳು ಯಾವುವು ಎಂಬುದರ ‘ತಪಾಸಣಾ ಪಟ್ಟಿ’ ತಯಾರಿಸಿ ಅದಕ್ಕೆ ಅನುಗುಣವಾಗಿಯೇ ನಡೆದುಕೊಳ್ಳಲು ಪೊಲೀಸರಿಗೆ ಸೂಚಿಸಬೇಕು. ಬಂಧಿತನನ್ನು ಹಾಜರುಪಡಿಸುವಾಗ ಪೊಲೀಸರು ನ್ಯಾಯಾಧೀಶರಿಗೆ ಈ ಪಟ್ಟಿ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ಮನವರಿಕೆ ಮಾಡಿಕೊಂಡ ನಂತರವಷ್ಟೇ ನ್ಯಾಯಾಧೀಶರು ಆರೋಪಿಯ ಬಂಧನಕ್ಕೆ ಒಪ್ಪಿಗೆ ಸೂಚಿಸಬೇಕು.
ಒಂದು ವೇಳೆ ಆರೋಪಿಯನ್ನು ಬಂಧಿಸುವ ಅವಶ್ಯಕತೆ ಇಲ್ಲದಿದ್ದರೆ ಅದರ ಕಾರಣಗಳನ್ನು ನಮೂದಿಸಿ ಪ್ರಕರಣ ದಾಖಲಾದ ಎರಡು ವಾರದೊಳಗೆ ನ್ಯಾಯಾಧೀಶರಿಗೆ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯು ಲಿಖಿತ ವರದಿ ಸಲ್ಲಿಸಬೇಕು’ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಸೂಕ್ತ ಕಾರಣಗಳಿಲ್ಲದೆ ಆರೋಪಿಯ ಬಂಧನವನ್ನು ದೃಢೀಕರಿಸುವ ನ್ಯಾಯಾಧೀಶರು ಇಲಾಖಾ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.