ಎಲ್ಲ ಅನುದಾನವನ್ನೂ ಸರ್ಕಾರಗಳು ಗ್ರಾಮ ಪಂಚಾಯಿತಿಗೇ ನೀಡುತ್ತವೆ. ನಮ್ಮನ್ನು ಅತಂತ್ರಗೊಳಿಸಿವೆ ಎಂದು ಇದೇ ಸಂದರ್ಭದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ದೊಡ್ಡ ದನಿಯಲ್ಲಿ ಹೇಳುತ್ತವೆ. ಆದರೆ ಅನೇಕ ಗ್ರಾಮ ಪಂಚಾಯಿತಿಗಳು ಅಗತ್ಯವಾಗಿ ಪಾಳು ಬಿದ್ದಿರುವ ಕೊಳವೆ ಬಾವಿಗಳನ್ನು ಮುಚ್ಚಿಸುವ ಕೆಲಸಕ್ಕೂ ತಾಲೂಕು ಪಂಚಾಯಿತಿಗೆ ಪತ್ರ ಬರೆದು ಹಣಕ್ಕಾಗಿ ಕಾಯುತ್ತಿವೆ.
ಈಗ ಅನುಪಯುಕ್ತ ಕೊಳವೆಬಾವಿಗಳ ಮರುಪೂರಣಕ್ಕೆ ರಾಜ್ಯ ಸರ್ಕಾರ ತಲಾ ₨ 25 ಸಾವಿರ ನೀಡಲು ಮುಂದಾಗಿರುವುದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿ ಸಂತೋಷ ತಂದಿರಬಹುದು. ಆದರೆ ತಮ್ಮ ಅಧಿಕಾರದ ಪರಿಮಿತಿಯೊಳಗೆ ವರಮಾನ ಸೃಜಿಸಿಕೊಳ್ಳುವ ವಿಷಯದಲ್ಲಿ ಪಂಚಾಯಿತಿಗಳು ತಮ್ಮ ಸೋಮಾರಿತನವನ್ನು ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕಾಗುತ್ತದೆ. ಕೆಲವು ಪಂಚಾಯಿತಿಗಳು ಇದಕ್ಕೆ ವ್ಯತಿರಿಕ್ತವಾಗಿವೆ ಎಂಬುದನ್ನೂ ಮರೆಯುವಂತಿಲ್ಲ.
ಅಂಥದ್ದೊಂದು ಪಂಚಾಯಿತಿಯು ಮುಳಬಾಗಲು ತಾಲ್ಲೂಕಿನಲ್ಲೇ ಇರುವುದು ವಿಶೇಷ. ದೇವರಾಯ ಸಮುದ್ರ ಪಂಚಾಯಿತಿಗೆ ಹೊರಗಿನಿಂದ ಯಾರೇ ಬಂದರೂ ನಗುಮುಖದಿಂದ ಸ್ವಾಗತಿಸುವ ಸದಸ್ಯ, ಗಿರಿಜಾ ಮೀಸೆಯ ಚಂಗಲರಾಯಪ್ಪ ಅವರು ನಡೆಸಿದ ವರಮಾನ ಗಳಿಕೆಯ ಪ್ರಯತ್ನದಿಂದ ಪಂಚಾಯಿತಿಗೆ ಹೊಸ ಕಟ್ಟಡವೊಂದನ್ನು ಕಟ್ಟಲು ಸಾಧ್ಯವಾಗಿದ್ದು ಹಲವು ವರ್ಷಗಳ ಹಿಂದಿನ ಮಾತು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದ ಕಾಲದಲ್ಲಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಂದ ಗುತ್ತಿಗೆದಾರ ಲ್ಯಾಂಕೋ ಸಂಸ್ಥೆಯು ಮಣ್ಣನ್ನು ಲಾರಿಗಟ್ಟಲೆ ಸಾಗಿಸುತ್ತಿತ್ತು. ಆದರೆ ಪಂಚಾಯಿತಿಗೆ ಒಂದು ರೂಪಾಯಿಯನ್ನೂ ನೀಡಿರಲಿಲ್ಲ. ಸರಿ, ಚೆಂಗಲರಾಯಪ್ಪ ಪಂಚಾಯತ್ ರಾಜ್ ಕಾಯ್ದೆಯ ಪುಸ್ತಕವನ್ನು ಓದಿದರು. ಸ್ಥಳೀಯ ಸಂಪನ್ಮೂಲವನ್ನು ಯಾರೇ ಬಳಸಿದರೂ, ಅಲ್ಲಿನ ಪಂಚಾಯಿತಿಗೆ ನಿಗದಿತ ಶುಲ್ಕ ಪಾವತಿಸಲೇಬೇಕು ಎಂಬ ನಿಯಮ ಕಾಣಿಸಿತು. ಅವರಿಗೆ ಅಷ್ಟೇ ಸಾಕಾಯಿತು. ಸಂಸ್ಥೆಗೆ ತಾಕೀತು ಮಾಡಿದರು. ಸಂಸ್ಥೆ ಇದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಚೆಂಗಲರಾಯಪ್ಪ ಪಟ್ಟು ಬಿಡಲಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರೆಗೂ ದೂರು ಒಯ್ದರು. ಕೊನೆಗೆ ಮಣಿದ ಸಂಸ್ಥೆ ಪಂಚಾಯಿತಿ ಹೇಳಿದಷ್ಟು ಹಣ ಕೊಡಲೇಬೇಕಾಯಿತು. ಇದು ಪಂಚಾಯಿತಿಯ ಯಶಸ್ಸು.
ಇದೇ ಹೆದ್ದಾರಿಯುದ್ದಕ್ಕೂ ಇರುವ ಇತರೆ ಪಂಚಾಯಿತಿಗಳೇಕೆ ಈ ಕೆಲಸವನ್ನು ಮಾಡಿ ವರಮಾನವನ್ನು ಸೃಜಿಸಿಕೊಳ್ಳಲಿಲ್ಲ?
ಇನ್ನೊಂದು ಉದಾಹರಣೆಯನ್ನು ಗಮನಿಸುವುದು ಅವಶ್ಯ.
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿಯ ಭೂಪಟದಲ್ಲಿ ಇದ್ದರೂ, ಜಗತ್ತಿನ ಪಂಚೇಂದ್ರಿಯಗಳಿಂದ ದೂರವೇ ಇರುವ ಚೆನ್ನಾಪುರ ಹಳ್ಳಿಯ ಸಮೀಪದಲ್ಲೇ ಇರುವ ಪುಟ್ಟ ಬೆಟ್ಟವನ್ನು ಸುತ್ತಮುತ್ತಲಿನ ಹಳ್ಳಿಯ ಜನರೇ ಕಲ್ಲು ಗಣಿಗಾರಿಕೆಗಾಗಿ ಸದ್ದಿಲ್ಲದೇ ಕರಗಿಸಿದ್ದಾರೆ, ಅದಕ್ಕೆ ಗ್ರಾಮ ಪಂಚಾಯಿತಿಯಿಂದ ಇದುವರೆಗೂ ಯಾರೊಬ್ಬರೂ ಅನುಮತಿ ಪಡೆದಿಲ್ಲ. ಶುಲ್ಕ ಪಾವತಿಸಿಲ್ಲ. ಈ ಬೆಟ್ಟದಂಥ ಕಲ್ಲಿನ ಗುಡ್ಡ ಸುಮಾರು 70 ಅಡಿಯಷ್ಟು ಎತ್ತರವಿತ್ತು. ಈಗ ಆ ಜಾಗದಲ್ಲಿ ದೊಡ್ಡ ಹಳ್ಳವಿದೆ. ಗಣಿಗಾರಿಕೆ ಈಗ ಗುಡ್ಡದ ಸುತ್ತಲೂ ವಿಸ್ತರಿಸುತ್ತಿದೆ. ಈ ವಿಷಯದಲ್ಲಿ ಗ್ರಾಮ ಪಂಚಾಯಿತಿ ಇದುವರೆಗೂ ಗಮನ ಹರಿಸಿಲ್ಲ. ದಿನವೂ ಲಕ್ಷಾಂತರ ರೂಪಾಯಿ ಕಲ್ಲಿನ ವ್ಯವಹಾರ ನಡೆಯುತ್ತಿದೆ. ವಿಪರ್ಯಾಸವೆಂದರೆ, ಪಂಚಾಯಿತಿ ಅಧ್ಯಕ್ಷೆಯ ಪತಿಯೇ ಗಣಿಗಾರಿಕೆಯ ನೇತೃತ್ವ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ದೂರು.
ನಿಯಮಬದ್ಧವಾಗಿ ಗಣಿಗಾರಿಕೆ ನಡೆಸಲು ಕ್ರಮ ಕೈಗೊಂಡು ಶುಲ್ಕ ವಸೂಲಿ ಮಾಡಿದ್ದರೆ ಇಷ್ಟು ಹೊತ್ತಿಗೆ ಲಕ್ಷಾಂತರ ರೂಪಾಯಿ ವರಮಾನ ಪಂಚಾಯಿತಿಗೆ ಬರುತ್ತಿತ್ತು. ಆದರೆ ಆ ವರಮಾನ ಪಂಚಾಯಿತಿಗೆ ಬೇಡವಾಯಿತೇ? ಬೆಟ್ಟವನ್ನು ಉಳಿಸಿಕೊಳ್ಳುವ ಜವಾಬ್ದಾರಿಯಾದರೂ ಯಾರದ್ದು?
ಕಟ್ಟಡಗಳ ಮೇಲಿನ ನಿಯಂತ್ರಣ
ಕರ್ನಾಟಕ ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಗ್ರಾಮ ಪಂಚಾಯಿತಿಗಳ ನಿಯಂತ್ರಣ) ನಿಯಮಗಳು 1994ರ ಪ್ರಕಾರ ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕಾದರೆ ಪಂಚಾಯಿತಿಗೆ ನಿರ್ದಿಷ್ಟ ಶುಲ್ಕವನ್ನು ಪಾವತಿಸುವುದು ಕಡ್ಡಾಯ. ಆ ನಂತರವಷ್ಟೇ ಪಂಚಾಯಿತಿ ಅನುಮತಿ ನೀಡಬೇಕು.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳುದ್ದಕ್ಕೂ ತಲೆ ಎತ್ತುತ್ತಿರುವ ಡಾಬಾಗಳು, ಹೋಟೆಲ್, ವಸತಿಗೃಹಗಳು ಸೇರಿದಂತೆ ಕಟ್ಟಡಗಳಿಂದ ಪಂಚಾಯಿತಿಗಳಿಗೆ ಬರುತ್ತಿರುವ ವರಮಾನವೇನು ಎಂಬ ಪ್ರಶ್ನೆಗೂ ಹಲವು ಪಂಚಾಯಿತಿಗಳಲ್ಲಿ ಸ್ಪಷ್ಟ ಉತ್ತರವೂ ದೊರಕದ ಸ್ಥಿತಿ ಇದೆ. ಅಂದರೆ, ಪಂಚಾಯಿತಿಗಳು ವರಮಾನ ಗಳಿಕೆಗಾಗಿ ಇರುವ ಅಧಿಕಾರವನ್ನು ಬಳಸುವಲ್ಲಿ ಸೋಲುತ್ತಿವೆಯೇ?
ತೆರಿಗೆ ಪರಿಷ್ಕರಣೆ
ತೆರಿಗೆ ಪರಿಷ್ಕರಣೆ ಸದ್ಯಕ್ಕೆ ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ದೊಡ್ಡ ಸವಾಲು. ಪಕ್ಷ ಮತ್ತು ಬಣ ರಾಜಕಾರಣದ ಅಡ್ಡಪರಿಣಾಮಗಳಿಂದ ಬಳಲುವ ಗ್ರಾಮ ಪಂಚಾಯಿತಿಗಳು ತೆರಿಗೆ ಪರಿಷ್ಕರಣೆ ಎಂದರೆ ಭಯ ಬೀಳುತ್ತವೆ. ಮುಳಬಾಗಲು ತಾಲ್ಲೂಕಿನಲ್ಲೇ ಮಾದರಿ ಪಂಚಾಯಿತಿ ಎನ್ನಿಸಿಕೊಂಡ ಓ ಮಿಟ್ಟೂರು ಪಂಚಾಯಿತಿಯಲ್ಲಿ ಎಲ್ಲ ಸದಸ್ಯರೂ ಪ್ರಯತ್ನಿಸಿದರೂ ತೆರಿಗೆ ಪರಿಷ್ಕರಣೆ ಸಾಧ್ಯವಾಗುತ್ತಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಬಹಳ ವರ್ಷಗಳ ಹಿಂದೆ ನಿಗದಿ ಮಾಡಿರುವ ತೆರಿಗೆಯ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂಬುದು ಈ ಸದಸ್ಯರಿಗೆ ಗೊತ್ತಿದೆ. ಆದರೆ ಅದನ್ನು ಹೆಚ್ಚಿಸುವುದು ಹೇಗೆ? ಎಂಬ ವಿಷಯದಲ್ಲಿ ಇನ್ನೂ ಗೊಂದಲವಿದೆ. ಇದು ಕಾರ್ಯನಿರತ ಪಂಚಾಯಿತಿಯ ಸ್ಥಿತಿ. ಜಿಲ್ಲೆಯ ಉಳಿದ ಬಹುತೇಕ ಪಂಚಾಯಿತಿಗಳು ತೆರಿಗೆ ಪರಿಷ್ಕರಣೆ ಎಂಬುದನ್ನು ಮರೆತ ಸ್ಥಿತಿಯಲ್ಲಿವೆ ಎಂಬುದು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತರಬೇತುದಾರರಾದ ಎಸ್.ಎಚ್.ಚೌಡಪ್ಪನವರ ವಿಷಾದ.
ಸರಿಯಾದ ರೀತಿಯಲ್ಲಿ ತೆರಿಗೆ ಪರಿಷ್ಕರಣೆಯೊಂದನ್ನು ಮಾಡಿಬಿಟ್ಟರೆ ಯಾವುದೇ ಪಂಚಾಯಿತಿಯೂ ಯಾರ ಬಳಿಯೂ ಹಣಕ್ಕಾಗಿ ಕೈ ಒಡ್ಡುವ ಪರಿಸ್ಥಿತಿ ಬರುವುದಿಲ್ಲ. ಆದರೆ ಅದು ಪಂಚಾಯಿತಿಗಳಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಅವರು. ಬಸ್, ಟ್ಯಾಕ್ಸಿ, ಆಟೋ ನಿಲ್ದಾಣಗಳ ಮೇಲೆ ಪಂಚಾಯಿತಿಯು ಶುಲ್ಕ ವಿಧಿಸಬಹುದು. ನಿಲ್ದಾಣಕ್ಕೆ ಬರುವ ಪ್ರತಿ ವಾಹನಗಳಿಂದಲೂ ಶುಲ್ಕ ವಸೂಲು ಮಾಡಬಹುದು. ಸ್ಥಾವರಗಳನ್ನು ಸ್ಥಾಪಿಸುವ ದೂರ ಸಂಪರ್ಕ ಸಂಸ್ಥೆಗಳಿಂದ ವಾರ್ಷಿಕ ಶುಲ್ಕವನ್ನು ವಸೂಲು ಮಾಡಬಹುದು. ಇವು ವರಮಾನ ಗಳಿಕೆಯ ಕೆಲವು ನಿದರ್ಶನಗಳಷ್ಟೇ. ಆದರೆ ಇವೆಲ್ಲವೂ ಕಾಗದದ ಮೇಲಷ್ಟೇ ಉಳಿದಿವೆ. ಹೀಗಾಗಿಯೇ ಪಂಚಾಯಿತಿಗಳು ಬಡವನ ಸ್ಥಿತಿಯಲ್ಲೇ ಇವೆ. ಎಷ್ಟೊಂದು ಬಡ ಸ್ಥಿತಿ ಎಂದರೆ, ಐದು ವರ್ಷದ ಹಿಂದಿನವರೆಗೂ (2009ರ ಮಾರ್ಚ್ 31ಕ್ಕೆ), ರಾಜ್ಯದ ಗ್ರಾಮ ಪಂಚಾಯಿತಿಗಳು ಪಾವತಿಸಬೇಕಾಗಿದ್ದ ವಿದ್ಯುತ್ ಬಿಲ್ ಮೊತ್ತ ₨ 1298 ಕೋಟಿ ಇತ್ತು!
73ನೇ ಸಾಂವಿಧಾನಿಕ ತಿದ್ದುಪಡಿಯ ಪ್ರಮುಖ ಆಶಯ ಅಧಿಕಾರ ವಿಕೇಂದ್ರೀಕರಣ. ಇದರ ಅರ್ಥ ಅಭಿವೃದ್ಧಿ ಚಟುವಟಿಕೆಗಳಿಗೆ ಬೇಕಾದ ಸಂಪನ್ಮೂಲಗಳನ್ನು ಪಂಚಾಯಿತಿಗಳು ಸ್ಥಳೀಯ ಆಡಳಿತದ ಮೂಲಕವೇ ಗಳಿಸಿಕೊಳ್ಳಲಿ ಎಂಬುದೂ ಆಗಿದೆ. ಆದರೆ ಸ್ವಾವಲಂಬಿಗಳಾಗಬೇಕಾಗಿದ್ದ ಪಂಚಾಯಿತಿಗಳು ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಿಗೆ ಕಾಯುತ್ತಾ, ಅವುಗಳು ರೂಪಿಸಿದ ಯೋಜನೆಗಳ ಜಾರಿಯಷ್ಟೇ ತಮ್ಮ ಕೆಲಸ ಎಂಬ ಸೀಮಿತ ವ್ಯಾಖ್ಯೆಯ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಇಷ್ಟಕ್ಕೂ ಪಂಚಾಯಿತಿಗಳಿಗೆ ವರಮಾನ ಗಳಿಕೆ ಎಂಬುದು ವರ್ಜ್ಯವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.