ಬಂಗಾಳ ಕಲಾ ಕ್ಷೇತ್ರದ ಹಿನ್ನೆಲೆಯುಳ್ಳ ಅಜಯ್ ಘೋಷ್ (ಬಂಗಾಳಿಗಳು ಅಜೋಯ್ ಘೋಷ್ ಎಂದೇ ಅವರನ್ನು ಸಂಬೋಧಿಸುವುದು) ಪುರಾಣ ಕಥಾನಕಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಿ ಹೆಸರಾದವರು. ಕಾಗದವನ್ನೇ ಭಿತ್ತಿಯಾಗಿಸಿಕೊಂಡು ಅವರು ಪುರಾಣದ ದೃಶ್ಯಗಳಿಗೆ ಜೀವತುಂಬಿದವರು. ಕೃಷ್ಣನ ಎದುರು ಮಂಡಿಯೂರಿ ಕುಳಿತ ಅರ್ಜುನನ ಪೇಂಟಿಂಗ್ ಅಜಯ್ ಕಟ್ಟಿಕೊಡುವ ವರ್ಣಸೂಕ್ಷ್ಮಕ್ಕೆ ಉತ್ತಮ ಉದಾಹರಣೆ. ಕೃಷ್ಣ, ಅರ್ಜುನ ಹಾಕಿದ ವಸ್ತ್ರಗಳು. ಅವರಿಬ್ಬರ ನೋಟಗಳ ಮೂಲಕ ಹೊಮ್ಮುವ ಭಾವ, ಆ ಘಟನೆ ನಡೆದಿರಬಹುದಾದ ಪರಿಸರ ಎಲ್ಲವನ್ನೂ ಅಜಯ್ ತಮ್ಮ ವರ್ಣಪ್ರಜ್ಞೆಯಿಂದಲೇ ಅಭಿವ್ಯಕ್ತಿಸಿದ್ದಾರೆ. ಈ ಪೇಂಟಿಂಗ್ನ ಬೆಲೆ ಏಳು ಲಕ್ಷ ರೂಪಾಯಿ.
ಅವರ ಸಂಗ್ರಹದ ಅಂಥ ಇನ್ನಷ್ಟು ಕಲಾಕೃತಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ. ‘ಜಾಯ್ ಆಫ್ ನ್ಯೂಆನ್ಸ್’ ಎಂಬ ಶೀರ್ಷಿಕೆಯ ಪ್ರದರ್ಶನ ಇದು. ಕನ್ನಡದಲ್ಲಿ ಇದನ್ನು ‘ವರ್ಣಸೂಕ್ಷ್ಮದ ಸಂತೋಷ’ ಎನ್ನಬಹುದು. ಲ್ಯಾವೆಲ್ಲೆ ರಸ್ತೆಯ ರೇವಾ ಶೋರೂಮ್ನ ಮೇಲ್ಭಾಗದ ‘ಗ್ಯಾಲರಿ–ಜಿ’ಯಲ್ಲಿ ಮಾರ್ಚ್ 30ಕ್ಕೆ ಪ್ರಾರಂಭವಾಗಲಿರುವ ಪ್ರದರ್ಶನ ಏಪ್ರಿಲ್ 5ರವರೆಗೆ ನಡೆಯಲಿದೆ.
‘ಭಾರತದಲ್ಲಿ ಕಲೆ ತನ್ನ ಧರ್ಮಸೂಕ್ಷ್ಮಗಳಿಂದ ರೂಪುಗೊಂಡಿದೆ’ ಎಂದು ವಿವೇಕಾನಂದರು ಹೇಳಿದ್ದರು. ಅಜಯ್ ಕಲಾಕೃತಿಗಳ ಮೂಲಕ ಆ ಮಾತು ಸಾಕಾರಗೊಂಡಿದೆ.