ಮುಳಬಾಗಲು: ವಿದ್ಯಾವಂತರು ಹೊರದೇಶಗಳಿಗೆ ವಲಸೆ ಹೋಗುವುದನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಡಾ. ಎಂ.ಆರ್. ರಂಗರಾವ್ ಹೇಳಿದರು.
ಪಟ್ಟಣದ ಸೋಮೇಶ್ವರ ಪಾಳ್ಯದಲ್ಲಿ ಗುರುವಾರ ಶಿರಿಡಿ ಸಾಯಿ ಬಾಬಾ ಸೇವಾ ಮಂಡಳಿ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಪ್ರತಿಭಾನ್ವಿತರು ಅವಕಾಶಗಳಿಂದ ವಂಚಿತವಾಗುತ್ತಿದ್ದಾರೆ. ಹೊರದೇಶಗಳಿಗೆ ಕೆಲಸ ಹುಡುಕಿ ಹೋಗುತ್ತಿರುವುದು ವಿಷಾದದ ಸಂಗತಿಯಾಗಿದೆ. ವಿದ್ಯಾವಂತರು ಸಮುದಾಯ ದೇಶದ ಸುಭದ್ರತೆಗೆ ಸಹಕರಿಸಬೇಕು ಎಂದರು.
ಮಕ್ಕಳನ್ನು ನಿರ್ದಿಷ್ಟ ಗುರಿಯತ್ತ ತಲುಪಿಸಲು ಪೋಷಕರು ಒಳ್ಳೆಯ ಕಥೆಗಳನ್ನು ಹೇಳಿ ಮಕ್ಕಳ ಮನಸ್ಸಿನಲ್ಲಿ ಕನಸು ಕಟ್ಟಬೇಕು. ಆ ಕನಸನ್ನು ನನಾಸಾಗಿಸುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು. ಶಾಸಕ ಜಿ.ಮಂಜುನಾಥ್ ಮಾತನಾಡಿ, ಪ್ರತಿಭಾನ್ವಿತ ಮಕ್ಕಳು ಪಡೆಯುವ ಪ್ರಶಸ್ತಿ ಅವರ ಜೀವನಕ್ಕೆ ತಿರುವು ನೀಡಲಿದೆ. ಮಕ್ಕಳಲ್ಲಿ ನಂಬಿಕೆಯ ಛಲ ದೃಢವಾಗಿರಬೇಕು ಎಂದು ತಿಳಿಸಿದರು.
ಎಸ್ಎಸ್ಎಲ್ಸಿ 43, ಪಿಯುಸಿಯ 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈಸ್ಟ್ ಇಂಡಿಯಾ ಪಾಯಿಂಟ್ ವಿದ್ಯಾಸಂಸ್ಥೆ ಬೆಂಗಳೂರು ಸಂಸ್ಥಾಪಕಿ ರಮಾದೇವಿ, ಡಾ.ರಂಗರಾವ್, ವಕೀಲ ಪ್ರಭಾಕರ್, ಕಲ್ಲುಪಲ್ಲಿ ಸತೀಶ್, ಬಿಇಒ ದೇವರಾಜ್, ರಾಮಪ್ರೀಯ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರಸಾದ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಪೂಜೆ: ಗುರುಪೂರ್ಣಿಮೆ ಪ್ರಯುಕ್ತ ಶುಕ್ರವಾರ ಪಟ್ಟಣದಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಪಟ್ಟಣದ ಗುಣಿಗಂಟಿ ಪಾಳ್ಯದಲ್ಲಿ ಗರುಡಿ ಜಿ.ರಾಮಯ್ಯ ಮೊದಲಿಯಾರ್ ಅವರ ಸಮಾಧಿಗೆ ಶಿಷ್ಯವೃಂದ ಹಾಗೂ ಹನುಮಾನ್ ವ್ಯಾಯಾಮ ಶಾಲೆ ವತಿಯಿಂದ ಗುರು ನಮನ ಸಲ್ಲಿಸಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ಮಾಡಲಾಯಿತು. ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಹಿರಿಯ ಗರಡಿಗಾರರಿಗೆ ಸನ್ಮಾನ ಮಾಡಲಾಯಿತು.
ಬೆಳಿಗ್ಗೆಯಿಂದ ಆಂಜನೇಯ ಸ್ವಾಮಿ, ಕನ್ನಿಕಾ ಪರಮೇಶ್ಪರಿ, ಶ್ರೀರಾಮ, ರಣಬೇರಮ್ಮ, ವಿಠಲನಾರಾಯಣಸ್ವಾಮಿ, ಶಂಕರ ತೀರ್ಥ, ಉದ್ಬವ ಶಿವಲಿಂಗ, ಸೋಮೇಶ್ಪರ, ಸೂರ್ಯನಾರಾಯಣ, ಮುತ್ಯಾಲಪೇಟೆ ಗಂಗಮ್ಮ, ಪಂಚಮುಖ ಆಂಜನೇಯಸ್ವಾಮಿ, ಶಿರಿಡಿ ಸಾಯಿ ಬಾಬ, ಆವಣಿ ರಾಮಲಿಂಗೇಶ್ಪರ, ಬೈರಕೂರು ಸೋಮೇಶ್ವರ, ವಿರೂಪಾಕ್ಷಿ ಸೋಮೇಶ್ವರ, ಕದರಿಪುರ ನರಸಿಂಹಸ್ವಾಮಿ, ಕುರುಡುಮಲೆ ವಿನಾಯಕ, ಕೊಲದೇವಿ ಗರುಡ, ಕಾಂತರಾಜ ಸರ್ಕಲ್ ಶನಿಮಹಾತ್ಮ, ಅಯ್ಯಪ್ಪಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನಡೆದವು.
ಮಾಲೂರು: ಸಾಯಿಬಾಬಾ ಪಲ್ಲಕ್ಕಿ ಉತ್ಸವ
ಮಾಲೂರು: ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಶುಕ್ರವಾರ ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಬಾಬಾ ವಿಗ್ರಹಕ್ಕೆ ಕಾಕಡ ಆರತಿ, ಸುಪ್ರಭಾತ ಸೇವೆ, ಅಭಿಷೇಕ, ವಿಷ್ಣು ಸಹಸ್ರನಾಮ ಹಾಗೂ ಭಕ್ತರಿಂದ ಕ್ಷೀರಾಭಿಷೇಕ ನಡೆಯಿತು. ನೂರಾರು ಭಕ್ತರು ಬೆಳಿಗ್ಗೆಯಿಂದ ಸಂಜೆಯವರೆಗೆ ಶಿರಡಿ ಸಾಯಿಬಾಬಾ ದರ್ಶನ ಪಡೆದರು.
ಹಿಂದುಪುರದ ಸಿ.ಪಿ.ವೇದಾವತಿ ಮತ್ತು ಸಂಗಡಿಗರಿಂದ ಸಾಯಿ ಬಾಬಾ ಆಖಂಡ ಭಜನೆ, ಸಂಜೆ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮವನ್ನು ಭಾವನಾ ಆನಂದ್ ನಡೆಸಿಕೊಟ್ಟರು. ಮಾಜಿ ಶಾಸಕ ಎ.ನಾಗರಾಜ್, ಪುರಸಭಾ ಅಧ್ಯಕ್ಷೆ ಭಾರತಮ್ಮ, ಶಿರಡಿ ಸಾಯಿ ಬಾಬಾ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಸಿ. ಅಪ್ಪಾಜಿಗೌಡ, ಸದಸ್ಯರಾದ ದಿನೇಶ್ ಗೌಡ ಅಮರ್ಸಿಂಗ್, ಗೋವಿಂದರಾಜಶೆಟ್ಟಿ, ವಾಸುದೇವ್, ಇ.ಕೆ.ಸೋಮಶೇಖರ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ ಸಾಯಿಬಾಬಾ ದರ್ಶನ ಪಡೆದು ತೀರ್ಥ, ಪ್ರಸಾದ್ ಸ್ವೀಕರಿಸಿದರು.
ಪಾದುಕೆ ದರ್ಶನ: ದೊಡ್ಡಪೇಟೆಯಲ್ಲಿರುವ ಶಂಕರನಾಯಣಸ್ವಾಮಿ ದೇವಾಲಯ ಆವರಣದಲ್ಲಿ ಗುರುಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿ ಬಾಬಾ ಪಾದುಕೆಗಳ ದರ್ಶನ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ಶುಕ್ರವಾರ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯಿತು. ಶಂಕರನಾರಾಯಣಸ್ವಾಮಿ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಭಕ್ತರಿಂದ ಸಾಯಿ ಭಜನೆ, ಪಂಚಾರತಿ ನಂತರ ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಶಿರಡಿ ಸಾಯಿ ಬಾಬಾ ಪಾದುಕೆಗಳನ್ನು ದೇವಾಲಯದಲ್ಲಿ ಭಕ್ತರ
ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದುಕೆಗಳ ಮೆರವಣಿಗೆ ನಡೆಯಿತು. ಭಕ್ತರು ಸಾಯಿ ಬಾಬಾ ಪಾದುಕೆಗಳ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.