ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಹಿವಾಟು ಎಂದಿನಂತೆ ಇರಲಿಲ್ಲ. ‘ಬಸ್ ಮುಷ್ಕರದ ಕಾರಣ ವ್ಯಾಪಾರ ಕಡಿಮೆ ಇದೆ’ ಎಂದು ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸುಬೇರ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಷಾಢ ಮಾಸವಾಗಿರುವುದರಿಂದ ಈಗ ವ್ಯಾಪಾರ ಕಡಿಮೆಯೇ ಇರುತ್ತದೆ. ಆದರೆ ಬೇರೆ ದಿನಗಳಿಗೆ ಹೋಲಿಸಿದರೆ ಇವತ್ತು ಏನೇನೂ ವ್ಯಾಪಾರ ಆಗಿಲ್ಲ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಪಾಷ. ಮುಷ್ಕರದಿಂದ ಇತರ ಅಂಗಡಿಗಳ ದೈನಂದಿನ ವಹಿವಾಟಿನ ಮೇಲೂ ಪರಿಣಾಮ ಉಂಟಾಗಿತ್ತು. ಹೆಚ್ಚಿನ ಅಂಗಡಿಗಳು ತೆರೆದಿದ್ದವು. ವಹಿವಾಟು ಕುಂಠಿತವಾಗಿತ್ತು.
‘ಬೆಳಿಗ್ಗೆ 10 ಗಂಟೆಯವರೆಗೆ ಹೆಚ್ಚು ಬಾಡಿಗೆ ಇತ್ತು. ಆದರೆ, ಮಧ್ಯಾಹ್ನದ ವೇಳೆ ಬಾಡಿಗೆ ಕಡಿಮೆ ಇದೆ. ಬೆಂಗಳೂರಿಗೆ ಹೊರಗಿನ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಮಾತ್ರ ನಮಗೆ ಬಾಡಿಗೆ. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಬಾಡಿಗೆಗೆ ಹೊಡೆತ ಬಿದ್ದಿದೆ’ ಎನ್ನುತ್ತಾರೆ ರಿಕ್ಷಾ ಚಾಲಕ ಶ್ರೀನಿವಾಸ್.