ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಷ್ಠರಾದ, ಗುಜರಾತ್ ವಿಧಾನಸಭೆ ಸ್ಪೀಕರ್ ವಾಜುಭಾಯ್ ವಾಲಾ (76) ಅವರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
ಎಚ್.ಆರ್. ಭಾರದ್ವಾಜ್ ಅವರಿಂದ ತೆರವಾದ ಕರ್ನಾಟಕ ರಾಜ್ಯಪಾಲರ ಹುದ್ದೆ ಮೇಲೆ ಕೇರಳ ಬಿಜೆಪಿ ನಾಯಕ ಒ. ರಾಜಗೋಪಾಲ್, ಮಾಜಿ ಕೇಂದ್ರ ಸಚಿವ ವಿಜಯ ಕುಮಾರ್ ಮಲ್ಹೋತ್ರಾ, ಖ್ಯಾತ ವಕೀಲ ಸೋಲಿ ಸೊರಾಬ್ಜಿ ಅವರೂ ಸೇರಿದಂತೆ ಅನೇಕರು ಕಣ್ಣಿಟ್ಟಿದ್ದರು. ಆದರೆ, ಯಾರೂ ನಿರೀಕ್ಷಿಸದ ವಾಜುಭಾಯ್ ಅವರನ್ನು ಗುಜರಾತಿನ ಗಾಂಧಿ ನಗರದಿಂದ ಕರ್ನಾಟಕದ ರಾಜಭವನಕ್ಕೆ ಕಳುಹಿಸುವ ತೀರ್ಮಾನ ಮಾಡಿ ಅಚ್ಚರಿ ಮೂಡಿಸಲಾಗಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ಸಿಂಗ್, ನಿರೀಕ್ಷೆಯಂತೆ ರಾಜಸ್ತಾನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಮಾಜಿ ಕೇಂದ್ರ ಸಚಿವೆ ಸಿ. ವಿದ್ಯಾಸಾಗರ ರಾವ್ ಮಹಾರಾಷ್ಟ್ರ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೆ.ಶಂಕರ ನಾರಾಯಣನ್ ಅವರನ್ನು ಭಾನುವಾರ ಕೇಂದ್ರ ಸರ್ಕಾರ ಮಿಜೋರಾಂಗೆ ವರ್ಗಾ ಮಾಡಿದ ಬಳಿಕ ಅವರು ರಾಜೀನಾಮೆ ನೀಡಿದ್ದರು. ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷ ಮೃದುಲಾ ಸಿನ್ಹಾ ಅವರನ್ನು ಗೋವಾ ರಾಜ್ಯಪಾಲರಾಗಿ ನೇಮಿಸಲಾಗಿದೆ.
ರಾಷ್ಟ್ರಪತಿ ಭವನ ಮಂಗಳವಾರ ಬಿಡುಗಡೆ ಮಾಡಿದ ರಾಜ್ಯಪಾಲರ ಪಟ್ಟಿಯಲ್ಲಿ ಕಲ್ಯಾಣ್ಸಿಂಗ್ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಅನಿರೀಕ್ಷಿತ ಹೆಸರುಗಳು. ವಾಜುಭಾಯ್, ವಿದ್ಯಾಸಾಗರ ರಾವ್ ಮತ್ತು ಮೃದುಲಾ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ರಾಜ್ಯಪಾಲರಾಗಿ ನೇಮಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಬೇರೆ ಬೇರೆ ಹೆಸರುಗಳು ಇದುವರೆಗೂ ಚಲಾವಣೆಯಲ್ಲಿದ್ದವು.
ಮೋದಿ ಉಡುಗೊರೆ
ಗುಜರಾತ್ ವಿಧಾನ ಸಭೆ ಸ್ಪೀಕರ್ ವಾಜುಭಾಯ್ ಅವರಿಗೆ ಕರ್ನಾಟಕ ರಾಜ್ಯಪಾಲ ಹುದ್ದೆ ‘ಉಡುಗೊರೆ’ ಆಗಿ ಬಂದಿದೆ. 13 ವರ್ಷದ ಹಿಂದೆ ವಾಜುಭಾಯ್ ತಮಗೆ ಮಾಡಿದ ಉಪಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಟ್ಟುಕೊಂಡು ಈ ಉಡು ಗೊರೆ ನೀಡಿದ್ದಾರೆ ಎಂದು ಉನ್ನತ ಬಿಜೆಪಿ ಮೂಲಗಳು ತಿಳಿಸಿವೆ.
2001ರಲ್ಲಿ ಕೇಶುಭಾಯ್ ಪಟೇಲರ ಉತ್ತರಾಧಿಕಾರಿ ಆಗಿ ನೇಮಕಗೊಂಡ ನರೇಂದ್ರ ಮೋದಿ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಡಿದ್ದರು. ಆಗ ಯಾವ ಸಚಿವರು ಮತ್ತು ಶಾಸಕರು ಕ್ಷೇತ್ರ ಬಿಟ್ಟುಕೊಡಲು ತಯಾರಿರಲಿಲ್ಲ. ಅಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಮೋದಿ ಅವರ ನೆರವಿಗೆ ಧಾವಿಸಿದವರು ಹಣಕಾಸು ಸಚಿವರಾಗಿದ್ದ ವಾಜುಭಾಯ್. ಆಗ ಸೌರಾಷ್ಟ್ರದ ರಾಜ್ಕೋಟ್ ವಿಧಾನಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು.
2002ರ ಫೆಬ್ರುವರಿಯಲ್ಲಿ ನಡೆದ ಉಪ ಚುನಾ ವಣೆ ಯಲ್ಲಿ ಮೋದಿ ಅತ್ಯಂತ ಪ್ರಯಾಸದಿಂದ ಗೆದ್ದರು. ಅವರ ಗೆಲುವಿನ ಅಂತರ ಬರೀ 14,728. ಅದೇ ಸಂದರ್ಭದಲ್ಲಿ ಚುನಾವಣೆ ಎದುರಿಸಿದ ಉಳಿದೆರಡು ಕ್ಷೇತ್ರಗಳು ಕಾಂಗ್ರೆಸ್ ಪಾಲಾದವು.
ಮೊದಲು ಕೇಶುಭಾಯ್ ಪಟೇಲ್ ಅವರಿಗೆ ನಿಷ್ಠರಾಗಿದ್ದ ವಾಜುಭಾಯ್ ಅನಂತರ ನಿಷ್ಠೆ ಬದಲಿಸಿದರು. ಹಿರಿಯ ನಾಯಕನಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದರೂ ಅದಕ್ಕಾಗಿ ಹಾತೊರೆದವರಲ್ಲ. ಈ ಗುಣವೇ ಅವರನ್ನು ರಾಜಭವನಕ್ಕೆ ಕರೆತಂದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನರೇಂದ್ರ ಮೋದಿ ಪ್ರಧಾನಿ ಆಗಿ ನೇಮಕಗೊಂಡ ಬಳಿಕ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಾಜುಭಾಯ್ ಹೆಸರು ಪ್ರಬಲವಾಗಿದ್ದರೂ ವಯಸ್ಸು ಅಡ್ಡಿಯಾಯಿತು. ಆನಂದಿಬೆನ್ ಪಟೇಲ್ ಅವರನ್ನು ಮೋದಿ ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ಇದರಿಂದ ವಾಲಾ ಅಸಮಾಧಾನಗೊಳ್ಳಲಿಲ್ಲ. ಕಳೆದ ಜನವರಿಯಲ್ಲಿ ವಾಜುಭಾಯ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು. ಮುಖ್ಯಮಂತ್ರಿ ವಹಿಸಿದ್ದ ಜವಾಬ್ದಾರಿಯನ್ನು ಅವರು ಮರು ಮಾತಾಡದೆ ಒಪ್ಪಿಕೊಂಡರು. ಆ ಸಂದರ್ಭದಲ್ಲಿ ವಾಜುಭಾಯ್ ಅವರ ವ್ಯಕ್ತಿತ್ವವನ್ನು ಮೋದಿ ಕೊಂಡಾಡಿದ್ದರು.
ಆರ್ಎಸ್ಎಸ್ ಪರಿಸರದಲ್ಲಿ ಬೆಳೆದು ಬಂದ ವಾಜುಭಾಯ್ ಕೆಳ ಹಂತದಿಂದ ರಾಜಕಾರಣ ಆರಂಭಿಸಿದವರು. ಮೊದಲಿಗೆ ರಾಜ್ಕೋಟ್ ನಗರಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿದ್ದರು. ಅನಂತರ ಮೇಯರ್ ಸ್ಥಾನಕ್ಕೂ ಏರಿದರು. ಗುಜರಾತ್ ವಿಧಾನಸಭೆಗೆ ಆರು ಸಲ ಆಯ್ಕೆಯಾಗಿರುವ ಅವರು ದೀರ್ಘ ಅವಧಿ ರಾಜ್ಯದ ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದಾರೆ. ವಾಜುಭಾಯ್ ರಾಜ್ಯ ಬಿಜೆಪಿಯ ಜನಪ್ರಿಯ ನಾಯಕ. ರಾಜ್ಯದ ಪ್ರಮುಖ ಬಿಜೆಪಿ ಕಾರ್ಯಕರ್ತರು, ನಾಯಕರನ್ನು ಹೆಸರಿಡಿದು ಕರೆಯುತ್ತಾರೆ. 76 ವರ್ಷವಾಗಿದ್ದರೂ ನೆನಪಿನ ಶಕ್ತಿ ಅಗಾಧವಾಗಿದೆ. ಜನರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಅವರಿಗಿದೆ ಎಂದು ಬಿಜೆಪಿ ಮೂಲಗಳು ವಿವರಿಸಿವೆ.
ಇನ್ನಷ್ಟು ಸುದ್ದಿಗಳು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.