ಬೆಂಗಳೂರು: ತೆರಿಗೆ ಬಾಕಿಯ ನೆಪವೊಡ್ಡಿ ಸಿವಿಲ್ ಗುತ್ತಿಗೆದಾರರನ್ನು ಬೆದರಿಸಿ ₨ 25 ಸಾವಿರ ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾಕಾ ನಾಯಕ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪೀಣ್ಯದ ನಾಗೇಂದ್ರ ಎಂಬುವರು ಬಸವೇಶ್ವರನಗರದಲ್ಲಿ ಸಿವಿಲ್ ಕಾಮಗಾರಿಗಳ ಗುತ್ತಿಗೆ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ.
ಈ ಕಂಪೆನಿ ₨ 38 ಲಕ್ಷ ವಾಣಿಜ್ಯ ತೆರಿಗೆ ಬಾಕಿ ಇರಿಸಿಕೊಂಡಿದೆ ಎಂದು ಬೆಂಗಳೂರಿನ ತೆರಿಗೆ ವಾರ್ಡ್ 6(4)ರ ಸಹಾಯಕ ಆಯುಕ್ತ ಡಾಕಾ ನಾಯಕ್ ನೋಟಿಸ್ ನೀಡಿದ್ದರು. ಆದರೆ, ತಾವು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ನಾಗೇಂದ್ರ ಅವರು ಸಮಜಾಯಿಷಿ ನೀಡಿದ್ದರು. ಆ ನಂತರ ಪದೇ ಪದೇ ಗುತ್ತಿಗೆದಾರರನ್ನು ಸಂಪರ್ಕಿಸಿದ್ದ ಅಧಿಕಾರಿ, ತೆರಿಗೆ ಪಾವತಿಸದಿದ್ದರೆ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದರು.
ಡಾಕಾ ನಾಯಕ್ ಅವರು ಖುದ್ದಾಗಿ ನಾಗೇಂದ್ರ ಅವರ ಮನೆಗೂ ತೆರಳಿ ಹೆದರಿಸಿದ್ದರು. ನಂತರ ತೆರಿಗೆ ಮೊತ್ತವನ್ನು ಕಡಿಮೆ ಮಾಡುವಂತೆ ಗುತ್ತಿಗೆದಾರರು ಕೋರಿದ್ದರು. ₨ 1.5 ಲಕ್ಷ ಲಂಚ ನೀಡಿದರೆ ತೆರಿಗೆ ಮೊತ್ತವನ್ನು ₨ 38 ಲಕ್ಷದಿಂದ ₨ 18 ಲಕ್ಷಕ್ಕೆ ಇಳಿಕೆ ಮಾಡುವುದಾಗಿ ತಿಳಿಸಿದ್ದರು.
₨ 1.5 ಲಕ್ಷದಷ್ಟು ಹಣ ತಮ್ಮ ಬಳಿ ಇಲ್ಲ ಎಂದು ಗುತ್ತಿಗೆದಾರರು ಉತ್ತರ ನೀಡಿದ್ದರು. ಆಗ ಕಂತಿನ ಮೂಲಕ ನೀಡುವಂತೆ ಸೂಚಿಸಿದ್ದರು. ಸೋಮವಾರ ₨ 25 ಸಾವಿರ ತಂದುಕೊಡುವಂತೆ ತಿಳಿಸಿದ್ದರು. ನಾಗೇಂದ್ರ ಅವರು ಈ ಕುರಿತು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
‘ದೂರು ನೀಡಿದ ಬಳಿಕ ದೂರವಾಣಿ ಮೂಲಕ ಡಾಕಾ ನಾಯಕ್ ಅವರನ್ನು ಸಂಪರ್ಕಿಸಿದಾಗ ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಹಣ ತರುವಂತೆ ಸೂಚಿಸಿದರು. ಅಲ್ಲಿಗೆ ಹೋಗಿ ಕರೆ ಮಾಡಿದಾಗ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಬರುವಂತೆ ತಿಳಿಸಿದರು. ಅಲ್ಲಿಗೆ ಹೋದಾಗ ಕಾಫಿ ಶಾಫ್ ಒಂದರಲ್ಲಿ ಹಣ ಪಡೆದರು.
ತಕ್ಷಣವೇ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಡಾ.ಮಹೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಎಂ.ನಾರಾಯಣ, ಇನ್ಸ್ಪೆಕ್ಟರ್ಗಳಾದ ರವಿಶಂಕರ್, ಎನ್.ಜಿ.ಶಿವಶಂಕರ್, ಪಂಡಿತ್ ಪಾಲ್ಗೊಂಡಿದ್ದರು.