ಏಪ್ರಿಲ್ 10ರ ವಾಚಕರವಾಣಿಯಲ್ಲಿ ‘ವಾಲ್ಮೀಕಿ ಯಾರು? ಸ್ಪಷ್ಟೀಕರಣ’ ಶೀರ್ಷಿಕೆಯಡಿ ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದ ಪತ್ರಕ್ಕೆ ಈ ಪ್ರತಿಕ್ರಿಯೆ ಬರೆಯುತ್ತಿದ್ದೇನೆ.
ನಾರಾಯಣಾಚಾರ್ಯ ಅವರು ವಾಲ್ಮೀಕಿಯ ಜಾತಿಯ ಬಗೆಗೆ ಅನಗತ್ಯ ಗೊಂದಲ ಹುಟ್ಟುಹಾಕಿದ್ದಾರೆ. ಜೊತೆಗೆ ತಮ್ಮ ವಾದಕ್ಕೆ ಆಧಾರವಾಗಿ ಪಂಜಾಬ್ ಹರಿಯಾಣ ಹೈಕೋರ್ಟ್ ನೀಡಿರುವ ತೀರ್ಪಿನ ಉಲ್ಲೇಖವನ್ನು ನೀಡಿದ್ದಾರೆ. ಆದರೆ ಆ ತೀರ್ಪಿನಲ್ಲಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ, ಕಳ್ಳನಾಗಿರಲಿಲ್ಲ. ಓರ್ವ ಸುಸಂಸ್ಕೃತನಾಗಿದ್ದ ಎಂದಷ್ಟೇ ಹೇಳಲಾಗಿದೆ. ಆತ ಬೇಡ ಅಲ್ಲ, ಬ್ರಾಹ್ಮಣ ಎಂದು ಈ ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ. 12.10.2009 ರಂದು ನ್ಯಾಯಮೂರ್ತಿ ರಾಜೀವ ಭಲ್ಲಾ ಅವರಿದ್ದ ಪೀಠ ನೀಡಿರುವ ಆದೇಶದಲ್ಲಿ ಇದು ಸ್ಪಷ್ಟವಾಗಿದೆ.
ಪಾಟಿಯಾಲದಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದ ಮಹರ್ಷಿ ವಾಲ್ಮೀಕಿ ಪೀಠದ ನಿರ್ದೇಶಕಿ ಡಾ. ಮಂಜುಳಾ ಸಹದೇವ ಅವರು ಇದಕ್ಕೆ ಸಾಕಷ್ಟು ಆಧಾರ ನೀಡಿದ್ದಾರೆ. ವೇದಗಳ ಕಾಲದಿಂದ ಹಿಡಿದು ಕ್ರಿ.ಶ. 9ನೇ ಶತಮಾನದವರೆಗಿನ ಆಧಾರಗಳಲ್ಲಿ ವಾಲ್ಮೀಕಿ ದರೋಡೆಕೋರನಾಗಿದ್ದ, ಕಳ್ಳನಾಗಿದ್ದ ಎಂಬಂತಹ ಸೂಚನೆಗಳು ಎಲ್ಲಿಯೂ ಲಭ್ಯವಿಲ್ಲ. 9ನೇ ಶತಮಾನದ ನಂತರವೇ ಅಂತಹ ಸುಳ್ಳುಗಳು ವ್ಯವಸ್ಥಿತವಾಗಿ ಸೃಷ್ಟಿಯಾಗಿವೆ.
ಮನುಷ್ಯ ವಿಕಾಸ ಆರಂಭವಾದುದೇ ಬೇಟೆಗಾರಿಕೆಯಿಂದ ಎಂದು ಚಾರ್ಲ್ಸ್ ಡಾರ್ವಿನ್ ತಮ್ಮ ವಿಕಾಸವಾದದಲ್ಲಿ ಹೇಳಿದ್ದಾರೆ. ಮೂಲತಃ ಎಲ್ಲರೂ ಬೇಟೆಗಾರರೇ.
ನಾರಾಯಣಾಚಾರ್ಯ ತರಹದ ವಿದ್ವಾಂಸರ ಬುದ್ಧಿವಂತಿಕೆ ಕೇವಲ ಒಂದು ವರ್ಗಕ್ಕೆ ಸೇರಿದುದು. ತಳವರ್ಗದವರಲ್ಲಿ ಪ್ರತಿಭೆ ಇರಬಾರದು ಎಂಬ ಮನೋಭಾವದಿಂದ ಹೊರಬರಲಿ. ಪ್ರತಿಭೆ ಯಾವುದೇ ಜಾತಿಗೆ ಸೀಮಿತವಲ್ಲ ಎಂಬುದು ನೆನಪಿರಲಿ.